ಕುಂದಾಪುರ: ಪ್ರಿಯತಮೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗದೇ ಪರಾರಿಯಾಗಿದ್ದ ಯುವಕನನ್ನು ಕುಂದಾಪುರ ಪೊಲಿಸರು ಬಂಧಿಸಿದ್ದಾರೆ.
ತಾಲೂಕಿನ ಕೆರಾಡಿ ನಿವಾಸಿ ಗಣೇಶ (24) ಎಂಬಾತನೇ ಆರೋಪಿ.
ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಯುವತಿಯೋರ್ವಳಿಗೆ ನಂಬಿಸಿ ಅತ್ಯಾಚಾರ ನಡೆಸಿದ್ದ ಈತ ಕಳೆದ 2 ತಿಂಗಳ ಹಿಂದೆ ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ಈತನಿಗೆ ಆಕೆ ಮದುವೆಯಾಗಲು ಬಲವಂತ ಮಾಡಿದಾಗ ಆಕೆಗೆ ಕೈಕೊಟ್ಟು ಇವಳನ್ನೊಬ್ಬಳನ್ನೆ ಬಿಟ್ಟು ಪರಾರಿಯಾಗಿದ್ದ. ದಿಕ್ಕೆಟ್ಟ ಈಕೆ ಅಲ್ಲೊಂದು ಮನೆಯಲ್ಲಿ ಆಶ್ರಯ ಪಡೆದಿದ್ದಳು. ತುಂಬು ಗರ್ಬಿಣಿಯಾಗಿದ್ದ ಈಕೆ ಹಣದ ಸಲುವಾಗಿ ತೀರ್ಥಹಳ್ಳಿಯ ಖಾತೆಯಲ್ಲಿದ್ದ ಹಣವನ್ನು ತೆಗೆಯಲು ಹೋದಾಗ ಮನೆಯವರಿಗೆ ವಿಚಾರ ತಿಳಿದು ಆಕೆಯನ್ನು ಪೊಲಿಸರ ಸಹಾಯದಿಂದ ಕುಂದಾಪುರಕ್ಕೆ ಕರೆತಂದಿದ್ದರು. ಆಗಲೇ ಮನೆಯವರಿಗೆ ಆಕೆಯ ಪ್ರೀತಿ ವಿಚಾರ ಹಾಗೂ ಗರ್ಭಿಣಿ ಎಂದು ಗೊತ್ತಾಗಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಲ್ಕು ದಿನಗಳ ಹಿಂದೆ ಅತ್ಯಾಚಾರದ ದೂರು ದಾಖಲಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಯುವಕನ ಪತ್ತೆಗೆ ಮುಂದಾಗಿದ್ದಾರೆ. ಶನಿವಾರ ಬೆಳಿಗ್ಗೆ ದಾರವಾಡದಿಂದ ಆರೋಪಿ ಗಣೇಶನನ್ನು ಬಂಧಿಸಿ ಕರೆ ತಂದಿದ್ದಾರೆ. ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.