ಮಂಗಳೂರು,ಅ.16 ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಭೂಗತ ಪಾತಕಿ ರವಿ ಪೂಜಾರಿ ಸಹಚರ ವಾಮಂಜೂರು ನಿವಾಸಿ ಪ್ರವೀಣ್ ಕಾರ್ಲೊ (27) ಎಂಬಾತನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ 1.30 ಗಂಟೆ ಸುಮಾರಿಗೆ ವಾಮಂಜೂರು ಜಂಕ್ಷನ್ ಬಳಿ ನಡೆದಿದೆ. ದಾಳಿಯಿಂದ ತಲೆ,ಹೊಟ್ಟೆ ಮತ್ತು ಬೆನ್ನಿಗೆ ಗಂಭೀರ ಗಾಯಗೊಂಡಿರುವ ಪ್ರವೀಣ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವೀಣ್ ಕಾರ್ಲೋ ಮಧ್ಯಾಹ್ನ 1.45ರ ಸುಮಾರಿಗೆ ವಾಮಂಜೂರು ಜಂಕ್ಷನ್ನಲ್ಲಿದ್ದ ಸಂದರ್ಭ ಅಲ್ಲಿಗೆ ವಾಹನದಲ್ಲಿ ಆಗಮಿಸಿದ ತಂಡ ಮರದ ಸೋಂಟೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದೆ. ತಲೆ, ಹೊಟ್ಟೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿರುವ ಪ್ರವೀಣ್ನನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಪ್ರವೀಣ್ ವಿರುದ್ಧ ಈ ಹಿಂದೆ ಹಲವಾರು ಕ್ರಿಮಿನಲ್ ಆರೋಪಗಳು ಕೇಳಿ ಬಂದಿದ್ದು, ಮಂಗಳೂರು ಗ್ರಾಮಾಂತರ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಭೂಗತ ಪಾತಕಿ ಹೆಸರಿನಲ್ಲಿ ಹಫ್ತಾ ವಸೂಲಿ, ಬೆದರಿಕೆ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳು ಈತನ ಮೇಲಿದೆ.
ಇತ್ತೀಚೆಗಷ್ಟೇ ವಾಮಂಜೂರಿನಲ್ಲಿ ಸಂತೋಷ್ ಕೊಟ್ಟಾರಿ ಕೊಲೆ ಯತ್ನ ನಡೆದಿತ್ತು. ಇದನ್ನು ನಾನೇ ಮಾಡಿಸಿದ್ದು ಎಂದು ಪ್ರವೀಣ್ ಹೇಳಿ ತಿರುಗಾಡುತ್ತಿದ್ದ ಎನ್ನಲಾಗಿದ್ದು, ಇದೇ ಕಾರಣದಿಂದ ತಂಡ ಈತನ ಮೇಲೆ ಗಂಭೀರ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ರಾಜೇಶ್, ಸಿಸಿಬಿ ಇನ್ಸ್ಪೆಕ್ಟರ್ ವೆಲೈಂಟೈನ್ ಡಿಸೋಜ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಪ್ರವೀಣ್ ಕೋಮಾದಲ್ಲಿದ್ದು, ಇನ್ನಷ್ಟೇ ಪೊಲೀಸರಿಗೆ ಹಲ್ಲೆ ಬಗ್ಗೆ ಮಾಹಿತಿ ನೀಡಬೇಕಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.