ಮುಂಬಯಿ : ಜಾತಿ ಬೇಧವನ್ನು ಬದಿಗೊತ್ತಿ, ಎಲ್ಲರೊಂದಿಗೆ ಒಂದಾಗಿ ನಡೆದು ಹಿರಿಯರು ಹಾಕಿದ ಯೋಜನೆಯನ್ನು ಕಿರಿಯರು ಕಾರ್ಯರೂಪಕ್ಕೆ
ತರುವುದರೊಂದಿಗೆ ಕುಲಾಲ ಸಂಘ ಮುಂಬಯಿ ಯಶಸ್ವಿಯ ಹಾದಿಯಲ್ಲಿ ಮುಂದುವರಿಯುತ್ತಿದ್ದು, ನವಿಮುಂಬಯಿ ಸಮಿತಿಯು ಯಶಸ್ವೀ ದಶಕವನ್ನು ಪೂರೈಸಿರುವುದು ಅಭಿನಂದನೀಯ ಎಂದು ನಗರದ ಜನಪ್ರಿಯ ಉದ್ಯಮಿ, ಸಮಾಜ ಸೇವಕ ಕೆ. ಡಿ. ಶೆಟ್ಟಿಯವರು ನುಡಿದರು.
ಅ. 12ರಂದು ನವಿಮುಂಬಯಿ ನೆರುಲ್ ನ ಅಗ್ರಿ ಕೋಲಿ ಸಂಸ್ಕೃತಿ ಭವನದಲ್ಲಿ ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ದಿನಪೂರ್ತಿ ನಡೆದ ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸಮಿತಿಯ ದಶಮಾನೋತ್ಸವ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿದ್ದು ಕುಲಾಲ ಸಮುದಾಯದವರೊಂದಿಗಿನ ತನ್ನ ನಂಟಿನ ಬಗ್ಗೆ ತಿಳಿಸಿ ಮಾತನಾಡುತ್ತಾ ಅವರು ಮಂಗಳೂರಿನ ಕುಲಾಲ ಭವನದ ಬೃಹತ್ ಯೋಜನೆಗೆ ಶುಭ ಹಾರೈಸಿದರು.
ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್ ಅವರು ಇತರ ಪದಾಧಿಕಾರಿಗಳೊಂದಿಗೆ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು.
ನೆರುಲ್ ಶನೀಶ್ವರ ದೇವಸ್ಥಾನದ ಧರ್ಮದರ್ಶಿ ರಮೇಶ್ ಪೂಜಾರಿ ಅವರೂ ಗೌರವ ಅತಿಥಿಯಾಗಿ ಉಪಸ್ಥಿತರಿದ್ದು, ಉತ್ತಮ ಕೆಲಸಗಳೊಂದಿಗೆ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿರುವ ಕುಲಾಲ ಸಮುದಾಯವು ತಮ್ಮ ಮೂಲ ಕಸುಬನ್ನು ಮರೆತಿಲ್ಲ. ನವಿಮುಂಬಯಿ ಪರಿಸರದಲ್ಲಿನ ಕುಲಾಲ ಬಾಂಧವರು ತಮ್ಮ ಸಮಾಜದ ಅಭಿವೃದ್ದಿಯೊಂದಿಗೆ ಇತರ ಸಮಾಜದ ಏಳಿಗೆಗೆ ಸ್ಪಂದಿಸುತ್ತಿರುವುದು ಪ್ರಶಂಸನೀಯ. ಮಂಗಳಾದೇವಿಯ ಆಶೀರ್ವಾದದೊಂದಿಗೆ ಕುಲಾಲ ಭವನ ಆದಷ್ಟು ಬೇಗನೆ ನಿರ್ಮಾಣಗೊಳ್ಳಲಿ ಎಂದರು.
ಇನ್ನೋರ್ವ ಗೌರವ ಅತಿಥಿ ರಂಗಭೂಮಿ ಫೈನ್ ಆರ್ಟ್ ನ ಅಧ್ಯಕ್ಷ ವಿ. ಕೆ. ಸುವರ್ಣ ರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾ ಸಮಾಜ ಸೇವೆಯಲ್ಲಿ ಕುಲಾಲ ಸಂಘ ಇತರ ಸಮಾಜದಂತೆ ಮುಂದುವರಿಯುತ್ತಿದ್ದು ಪಿ. ಕೆ. ಸಾಲ್ಯಾನರು ಇತರ ಸಮಾಜದೊಂದಿಗೆ ಬೆಳೆಸಿದ ಸಂಬಂಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತುಳುಕೂಟ ಐರೋಲಿಯ ಅಧ್ಯಕ್ಷ ನಾಡಾಜೆಗುತ್ತು ಜಗದೀಶ್ ಶೆಟ್ಟಿಯವರು ಮಾತನಾಡುತ್ತಾ ದಶಮಾನೋತ್ಸವವನ್ನು ಆಚರಿಸುತ್ತಿರುವ ನವಿಮುಂಬಯಿ ಸ್ಥಳಿಯ ಸಮಿತಿಯ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದ ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿಯವರು ಮಾತನಾಡುತ್ತಾ ನಾವು ನಮ್ಮ ಜನ್ಮಭೂಮಿಯಿಂದ ಈ ಕರ್ಮಭೂಮಿಗೆ ಬಂದು ಜನ್ಮಭೂಮಿಯೊಂದಿಗೆ ಈ ಕರ್ಮಭೂಮಿಗಯನ್ನು ಪ್ರೀತಿಸೋಣ. ಆಗಾದಲ್ಲಿ ನಮ್ಮ ಮುಂದಿನ ಜೀವನ ಉತ್ತಮವಾಗುವುದು. ನಿಸ್ವಾರ್ಥ ಸೇವೆಗೆ ಪರಮಾತ್ಮನು ಫಲ ಕೊಡುತ್ತಾರೆ. ನಮ್ಮ ಮಕ್ಕಳಿಗೆ ಇಸ್ವಾರ್ಥ ಸೇವೆಯ ಮಾರ್ಗದರ್ಶನ ನೀಡಬೇಕು ಇದರಿಂದ ಹಿರಿಯರಿಗೂ ಉತ್ತಮ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಗಿರೀಶ್ ಸಾಲ್ಯಾನ್ ಅವರು ಎಲ್ಲಾ ಸಮುದಾಯದ ಗಣ್ಯರು ಇಂದಿಲ್ಲಿ ಉಪಸ್ಥಿತರಿದ್ದುದರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ವಿದ್ಯೆ, ಹಣ, ಸಂಘಟನಾ ಶಕ್ತಿ ಇದ್ದಲ್ಲಿ ಸಂಘಟನೆ ಎತ್ತರಕ್ಕೆ ಬೆಳೆಯಬಹುದು. ಕುಲಾಲ ಭವನಕ್ಕೆ ನಮ್ಮ ಸಮಾಜ ಮಾತ್ರವಲ್ಲದೆ ಇತರ ಸಮಾಜದ ಗಣ್ಯರು ಸಹಕರಿಸುತ್ತಿದ್ದು ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಈ ಯೋಜನೆಯನ್ನು ಮುಂದುವರಿಸುತ್ತಿದ್ದೇವೆ ಎಂದರು.
ದೇವದಾಸ ಎಲ್. ಕುಲಾಲ್ ಸಂಘದ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ರಘು ಮೂಲ್ಯ ಪಿ. ಎಲ್ಲರನ್ನು ಸ್ವಾಗತಿಸಿದರು.
ಸಮಿತಿಯ ಹಿರಿಯ ಸದಸ್ಯರಾದ ಪಾದೆಬಟ್ಟು ಶೇಖರ್ ಮೂಲ್ಯ ಮತ್ತು ಪ್ರಭಾಕರ ವಾಸು ಬಂಗೇರ ದಂಪತಿಯನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.
ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ, ಪತ್ರಕರ್ತ ಬಿ. ದಿನೇಶ್ ಕುಲಾಲ್ ಅವರು ಮಂಗಳೂರಿನ ಕುಲಾಲ ಭವನ ನಿರ್ಮಾಣ ಕೆಲಸದ ಪ್ರಗತಿಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಮಾಜ ಬಾಂಧವರ ಹಾಗೂ ದಾನಿಗಳ ಸಹಾಯದಿಂದ ತೀವ್ರಗತಿಯಲ್ಲಿ ಭವನದ ಕೆಲಸ ಮುಂದುವರಿಯುತ್ತಿದೆ ಎಂದರು.
ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ದೇವದಾಸ್ ಕುಲಾಲ್, ಅಮೂಲ್ಯ ಪತ್ರಿಕೆಯ ಉಪಸಂಪಾದಕ ಮುಂಡ್ಕೂರು ಶಂಕರ ವೈ. ಮೂಲ್ಯ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಮತಿ ಬಂಜನ್, ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್,ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಗೋಪಾಲ ಬಂಗೇರ ಮೊದಲಾದವರು ಮಾತನಾಡಿ ಸ್ಥಳೀಯ ಸಮಿತಿಗೆ ಶುಭ ಹಾರೈಸಿದರು.
ರಘು ಬಿ. ಮೂಲ್ಯ ಮತ್ತು ಶಶಿಕುಮಾರ್ ವಿ. ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಡಾ. ಹರೀಶ್ ಬಿ. ಸಾಲ್ಯಾನ್, ಅಣ್ಣಿ ಮೂಲ್ಯ, ಉಮೇಶ್ ಬಂಗೇರ, ಮನೋಜ್ ಸಾಲ್ಯಾನ್, ಡಾ. ನಿಖೇಶ್ ಮೂಲ್ಯ, ಸುಂದರ ಕರ್ಮರನ್, ನಾರಾಯಣ ಬಂಜನ್, ಕೃಷ್ಣ ಮೂಲ್ಯ, ಮೋಹನ್ ಬಂಜನ್, ಸುರೇಶ್ ಕೆ. ಕುಲಾಲ್, ಹರೀಶ್ಚಂದ್ರ ಮೂಲ್ಯ, ರಘು ಮೂಲ್ಯ, ಮಲ್ಲಿಕಾ ಡಿ. ಕುಲಾಲ್, ಪ್ರೇಮಾ ಎಲ್. ಮೂಲ್ಯ, ಮಾಲತಿ ಅಂಚನ್, ಶಶಿಕಲಾ ಮೂಲ್ಯ ಹಾಗೂ ಸ್ಥಳೀಯ ಮತ್ತು ಉಪಸಮಿತಿಯ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮನೋರಂಜನೆಯ ಅಂಗವಾಗಿ ’ಕಲಾಗೊಂಚಿಲ’ ನೃತ್ಯ ಕಾರ್ಯಕ್ರಮ ಹಾಗೂ ಶಶಿಕುಮಾರ್ ಕುಲಾಲ್ ರಚಿಸಿ ನಿರ್ದೇಶಿಸಿದ ’ಒಯಿಕ್ ಲಾ ಭಾಗ್ಯ ಬೋಡು’ ತುಳು ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್