ಮಂಗಳೂರು : ಮುಂದಿನ ನವಂಬರ್ನಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ನ ಬೆಳಗಾವಿ ಅಧಿವೇಶನದಲ್ಲಿ ತಾನು ಕೊಂಕಣಿಯಲ್ಲಿಯೇ ಮಾತನಾಡಲಿದ್ದು ಇಷ್ಟರಲ್ಲಿಯೇ ಈ ಬಗ್ಗೆ ವಿಧಾನಪರಿಷತ್ ಸಭಾಪತಿಗೆ ಸೂಚನೆ ನೀಡಿ ದುಬಾಷಿ ನಿಯುಕ್ತ ಮಾಡಲು ಕೋರಿದ್ದಾಗಿ ಐವನ್ ಡಿ’ಸೋಜಾ ಹೇಳಿದ್ದಾರೆ.
ಅವರು ಕೊಂಕಣಿ ನಾಟಕ ಸಭೆಯ ಎಪ್ಪತೊಂದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಸ್ಥಾನಪಡೆದ ರಾಷ್ಟ್ರ ಮಟ್ಟದ ಕೊಂಕಣಿ ಭಾಷೆಗೆ ನಾಟಕ ಅಕಾಡೆಮಿಯನ್ನು ಶಾಸಕ ಜೆ.ಆರ್.ಲೋಬೊರವರ ಜೊತೆಗೂಡಿ ಮಾಡಲು ಹೆಚ್ಚು ಕಷ್ಟಕರವಾಗಲಿಕ್ಕಿಲ್ಲ ಎಂದ ಅವರು ಬೇರೆ ಬಾಷೆಗಳಂತೆ ಸ್ಥಳಿಯ ಭಾಷೆ ಕೊಂಕಣಿ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕೊಂಕಣಿ ಮಾತನಾಡುವ ಜನರಿದ್ದಾರೆ. ಗೋವಾ ಕೊಂಕಣಿ ರಾಜ್ಯವೂ ಆಗಿದೆ ಎಂದರು. ಮುಂದೆ ನಡೆವ ಮಂಗಳೂರಿನ ಹೊಸ ರಂಗಮಂದಿರದಲ್ಲಿ ಕೊಂಕಣಿಗೂ ಸ್ಥಾನ ನೀಡಲು ಹಕ್ಕು ಮಂಡನೆ ಮಾಡಲು ಹಾಗೂ ತನ್ನ ಅವಧಿಯೊಳಗೆ ಡೊನ್ ಬೊಸ್ಕೊ ಹೊಲ್ ನವೀಕರಿಸಿ ಕಟ್ಟಲು ಸಹಕರಿಸುವುದಾಗಿ ನುಡಿದರು.
ವೇದಿಕೆಯಲ್ಲಿದ್ದ ಮುಖ್ಯ ಅತಿಥಿಯಾಗಿದ್ದ ದಾಯ್ಜಿ ವಲ್ಡ್ ಕೊಟ್ ಕಾಮ್ ಇದರ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಇವರು ಮಂಗಳೂರಿನಲ್ಲಿ ಕೊಂಕಣಿ ನಾಟಕ ಅಕಾಡೆಮಿಯನ್ನು ಸ್ಥಾಪಿಸಲು ಐವನ್ ಡಿ’ಸೋಜರವರನ್ನು ಒತ್ತಾಯಿಸಿದರು. ಗೌರವ ಅತಿಥಿಯಾಗಿದ್ದ ತೋಮಸ್ ಸಿಕ್ವೇರಾ ಅಬುದಾಬಿ ಇವರು ಶುಭ ಹಾರೈಸಿದರು.
ಕೊಂಕಣಿ ಕಲೆಗೆ ನೀಡಿದ ಸೇವೆಗೆ ಟೊನಿ ರುಜಾಯ್ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪಾ. ಪೀಟರ್ ಸಿಪ್ರಿಯನ್ ಡಿ’ಸೋಜಾ ಸ್ವಾಗತಿಸಿ, ಉಪಾಧ್ಯಕ್ಷ ಡೊಲ್ಪಿ ಸಲ್ಡಾನಾ ವಾರ್ಷಿಕ ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಮಿನೇಜಸ್ ವಂದಿಸಿದರು. ಸಿಜ್ಯೆಸ್ ತಾಕೊಡೆ ನಿರೂಪಿಸಿದರು.
ಸಭಾ ಕಾರ್ಯಕ್ರಮ ನಂತರ ಜೋಕರ್ ಕಾಸ್ಸಿಯಾ ವಿರಚಿತ ಡೊಲ್ಲಾ ಮಂಗಳೂರು ಇವರ ನಿರ್ದೇಶನದ ‘ಜಾಣಾ ಸಗ್ಳೊ ಗಾಂವ್’ ಕೊಂಕಣಿ ನಾಟಕ ಪ್ರದರ್ಶಿಸಲಾಯಿತು.