ಮಂಗಳೂರು: ತುಳು ಸಿನಿಮಾ ಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಜಯಕಿರಣ ಫಿಲಂಸ್ ಲಾಂಛನದ ಚೊಚ್ಚಲ ಸಿನಿಮಾ, ಪ್ರಕಾಶ್ ಪಾಂಡೇಶ್ವರ ನಿರ್ಮಾಣದ ಚಾಲಿಪೋಲಿಲು ತುಳು ಚಿತ್ರದ ಹಾಡಿನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ ನಗರದ ಪ್ರೆಸ್ ಕ್ಲಬ್ನಲ್ಲಿ ನಡೆಯಿತು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ರಂಗಭೂಮಿಯ ಖ್ಯಾತ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್, ಕುಸಲ್ದರಸೆ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಅವರು ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಚಿತ್ರದ ನಿರ್ಮಾಕ ಪ್ರಕಾಶ್ ಪಾಂಡೇಶ್ವರ್ ಉಪಸ್ಥಿತರಿದ್ದರು. ಕಾರ್ಯಕಾರಿ ನಿರ್ಮಾಕಪ ಜಗನ್ನಾಥ್ ಶೆಟ್ಟಿ ಬಾಳಾ ಸ್ವಾಗತಿಸಿದರು. ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸುದ್ಧಿಗಾರರಲ್ಲಿ ಮಾತನಾಡಿದ ಚಿತ್ರದ ನಿರ್ಮಾಕಪ ಪ್ರಕಾಶ್ ಪಾಂಡೇಶ್ವರ್ ಅವರು, ದಕ್ಷಿಣ ಭಾರತದಲ್ಲೇ ಖ್ಯಾತರಾಗಿರುವ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಧ್ವನಿ ಇರುವುದು, ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಸಂಗೀತ ನಿರ್ದೇಶನ ಮಾಡಿರುವುದರಿಂದ ಈಗಾಗಲೇ ಈ ಸಿನಿಮಾದ ಹಾಡುಗಳು ಅಲ್ಲಲ್ಲಿ ಹಾಡಲ್ಪಟ್ಟು, ಹಿಟ್ ಆಗುವ ಎಲ್ಲ ಲಕ್ಷಣಗಳನ್ನು ತೋರಿಸುತ್ತಿವೆ. ಇದೀಗ ಸಿನಿಮಾದ ಹಾಡುಗಳ ಧ್ವನಿಸುರುಳಿ ಬಿಡುಗಡೆಯಾಗಿರುವುದರಿಂದ ಹೆಚ್ಚಿನ ಜನರನ್ನು ತಲುಪಲಿದೆ ಎಂದು ತಿಳಿಸಿದರು.
ಇದರಲ್ಲಿ ಒಟ್ಟು ಆರು ಹಾಡುಗಳಿವೆ. ಚಾಲಿಪೋಲಿಲು ಹಾಡನ್ನು ವಿಜಯಕುಮಾರ್ ಕೊಡಿಯಾಲ್ಬೈಲ್ ಅವರು ರಚಿಸಿದ್ದು, ಚಿಂತನ್ ವಿಕಾಸ್ ಹಾಡಿದ್ದಾರೆ. ಓ ಮೈನಾ ಎಂಬ ವಿ. ಮನೋಹರ್ ಅವರು ಬರೆದಿರುವ ಹಾಡನ್ನು ರಿತಿಶಾ ಪದ್ಮನಾಭನ್ ಹಾಡಿದ್ದಾರೆ. ದೇವದಾಸ್ ಕಾಪಿಕಾಡ್ ರಚನೆಯ ದಬಕ್ ದಬಾ ಐಸಾ ಹಾಡನ್ನು ಮೋಹನ್, ವಿ. ಮನೋಹರ್ ಬರೆದಿರುವ ಮಹಾಮಾಯೆ ಹಾಡನ್ನು ಅನುರಾಧಾ ಭಟ್, ವೀರೇಂದ್ರ ಶೆಟ್ಟಿ ಕಾವೂರ್ ಅವರ ಮಧುಶಾಲೆದೆ ಸೇಲೆ ಹಾಡನ್ನು ಇಂಚರ ರಾವ್ ಹಾಗೂ ವೀರೇಂದ್ರ ಶೆಟ್ಟಿ ಅವರು ಬರೆದಿರುವ ಮತ್ತೊಂದು ಹಾಡು ತೋಜಂದಿ ಮಾಯೆ ಪದ್ಯವನ್ನು ಖ್ಯಾತ ಗಾಯಕ ಮಣಿಕಾಂತ್ ಕದ್ರಿ ಅವರು ಹಾಡಿದ್ದಾರೆ ಎಂದರು.
ಚಾಲಿಪೋಲಿಲು ತುಳು ಸಿನಿಮಾ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಗೆ ಸಿದ್ದವಾಗಿದೆ. ತುಳು ಸಿನಿಮಾ ರಂಗಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ, ತುಳು ಸಿನಿಮಾದ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆಯುವ ತವಕದಲ್ಲಿ, ಚದುರಿ ಹೋಗಿರುವ ತುಳು ಕಲಾಭಿಮಾನಿಗಳನ್ನು ಒಂದೇ ಸಿನಿಮಾ ಸೂರಿನಡಿಯಲ್ಲಿ ಕಟ್ಟಿ ಹಾಕಿ ಏಕ ಕಾಲಕ್ಕೆ ಎಲ್ಲರನ್ನೂ ತೆರೆಯ ಮೇಲೆ ಮೂಡಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ.
ಮುಖ್ಯವಾಗಿ ತುಳು ರಂಗಭೂಮಿಯ ಹೆಚ್ಚಿನೆಲ್ಲ ಪ್ರಮುಖ ತಂಡಗಳ ಮುಖ್ಯ ಕಲಾವಿದರೆಲ್ಲರಿಗೂ ಇಲ್ಲಿ ಅವಕಾಶ ನೀಡಲಾಗಿರುವುದು ಮತ್ತು ಈ ರೀತಿ ಎಲ್ಲ ಪ್ರಮುಖ ಕಲಾವಿದರನ್ನು ಸೇರಿಸಿಕೊಂಡು ನಿರ್ಮಾಣವಾಗುತ್ತಿರುವ ಮೊದಲ ತುಳು ಸಿನಿಮಾ ಇದು. ಸುಮಾರು ೪೦೦ಕ್ಕೂ ಮಿಕ್ಕಿದ ತಮಿಳು, ತೆಲುಗು, ಮಲಯಾಳ, ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕೂಲ್ ಜಯಂತ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಮೊದಲ ತುಳು ಸಿನಿಮಾ ಚಾಲಿಪೋಲಿಲು.
ಮಲಯಾಳಿ ಸಿನಿಮಾಗಳಲ್ಲಿ ಕಂಡುಬರುವಂಥ ಉತ್ಕೃಷ್ಟ ಗುಣಮಟ್ಟದ ಹಾಸ್ಯಪ್ರಧಾನ ಚಿತ್ರವಾಗಿರುವ ಇದು ಆ ಸಾಲಿಗೆ ಸೇರುವ ಮೊದಲ ತುಳು ಚಿತ್ರ. ತುಳು ರಂಗಭೂಮಿಯ ಎರಡು ಅತಿ ಪ್ರಮುಖರಾಗಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಜಂಟಿಯಾಗಿ ದುಡಿದಿರುವ ಮೊದಲ ತುಳು ಸಿನಿಮಾ ಇದು. ಮಲಯಾಳ ಚಿತ್ರರಂಗದ ಖ್ಯಾತ ಕೆಮೆರಾಮ್ಯಾನ್ ಉತ್ಪಲ್ ನಾಯನಾರ್ ಅವರ ಕೆಮರಾದಿಂದ ಮೂಡಿ ಬಂದಿರುವ ಮೊದಲ ತುಳು ಚಿತ್ರ.
ಎರಡು ಕೆಮರಾಗಳನ್ನು ಬಳಸಿಕೊಂಡು ಸುಮಾರು 26 ದಿನಗಳ ಕಾಲ ಒಂದು ಹಂತದಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ಒಂದು ಉತ್ತಮ ಸ್ಟಂಟ್ ದೃಶ್ಯವಿದೆ. ಈ ದೃಶ್ಯಕ್ಕಾಗಿ ವಿಶೇಷ ತಯಾರಿ ಮಾಡಲಾಗಿದ್ದು, ವಿನೋದ್ ಬೆಂಗಳೂರು ನೇತೃತ್ವದಲ್ಲಿ ನಡೆದಿದೆ. ಈ ಸ್ಟಂಟ್ ದೃಶ್ಯಕ್ಕಾಗಿ ಬೆಂಗಳೂರಿನ ಒಂದು ತಂಡವೇ ಬಂದಿತ್ತು. ಹೊಡೆದಾಟದ ದೃಶ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ವಿ.ಮನೋಹರ್ ಸಂಗೀತ ಒದಗಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನಲೆ ಸಂಗೀತವಿದೆ. ಮಾಧವ ಶೆಟ್ಟಿ ಸುರತ್ಕಲ್ ಚಿತ್ರದಲ್ಲಿ ತಾಂತ್ರಿಕ ನಿರ್ದೇಶಕರಾಗಿ ದುಡಿದಿದ್ದಾರೆ.
ಯುವ ನಿರ್ದೇಶಕ ವಿರೇಂದ್ರ ಶೆಟ್ಟಿ ಕಾವೂರು ಅವರ ನಿರ್ದೇಶನವಿರುವ ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಅವರದ್ದೇ. ಜತೆಗೆ ಸಾಹಿತ್ಯವನ್ನೂ ಒದಗಿಸಿದ್ದಾರೆ. ಇವರ ಜತೆಗೆ ವಿ.ಮನೋಹರ್ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ಬೈಲ್ ಕೂಡ ಹಾಡುಗಳನ್ನು ಬರೆದಿದ್ದಾರೆ.
ಈ ಪೈಕಿ ಕಾಪಿಕಾಡ್ ಮತ್ತು ಕೊಡಿಯಾಲ್ಬೈಲ್ ರಚನೆಯ ಹಾಡುಗಳು ಈಗಾಗಲೇ ಕೆಲವು ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡಲ್ಪಡುತ್ತಿದ್ದು, ಅಪಾರ ಜನಮನ್ನಣೆ ಪಡೆಯುತ್ತಿದೆ. ಜನರ ಬಾಯಲ್ಲಿ ಗುರುತಿಸಲ್ಪಡುತ್ತಿದೆ. ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದು ಹಾಡನ್ನು ಮಡಿಕೇರಿಯಲ್ಲಿ ಅದ್ಬುತವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ. ಮಂಗಳೂರಿನ ಸುತ್ತಮುತ್ತ, ಕಾವೂರು, ಸುರತ್ಕಲ್ ಸಮೀಪದ ಚೇಳ್ಯಾರುಪದವು, ಸಸಿಹಿತ್ಲು, ಮಡಿಕೇರಿ…ಮುಂತಾದ ಆಕರ್ಷಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಲ್ಪಟ್ಟಿರುವ ಈ ಸಿನಿಮಾದಲ್ಲಿ ಜಿಲ್ಲೆಯ ಪ್ರಕೃತಿ ಸೊಬಗನ್ನು ಪ್ರೇಕ್ಷಕರಿಗೆ ಉಣಬಡಿಸಲು ನಿರ್ಮಾಪಕರು ಬಯಸಿರುವುದು ಸಿನಿಮಾದಲ್ಲಿ ಪ್ರತಿಬಿಂಬಿಸಲ್ಪಡಲಿದೆ.
ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಅವರು ತಮ್ಮ ಪ್ರತಿಭೆಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದ್ದಾರೆ. ಕಾಪಿಕಾಡ್ ಅದ್ಭುತ ಅಭಿನಯದ ಮೂಲಕ ನಟನಾಗಿ, ಒಂದು ಹಾಡು ಬರೆದು ಹಾಡುವ ಮೂಲಕ ಸಾಹಿತಿ ಮತ್ತು ಗಾಯಕನಾಗಿ, ಡ್ಯಾನ್ಸ್ ಮಾಡುವ ಮೂಲಕ ಡ್ಯಾನ್ಸರ್ ಆಗಿ, ಸ್ಟೆಂಟ್ ದೃಶ್ಯದಲ್ಲೂ ಭಾಗವಹಿಸಿ ಫೈಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಿರುವುದು ಅದ್ಭುತವೇ. ಕಾಪಿಕಾಡ್ರಂಥ ಮಹಾ ಕಲಾವಿದರಿಂದ ಇಂಥ ಕಲಾಸೇವೆಯನ್ನು ಪಡೆದುಕೊಂಡಿರುವ ಚಾಲಿಪೋಲಿಲು ಬಗ್ಗೆ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆಯಿರುವುದು ಸಹಜವೇ. ಕಾಪಿಕಾಡ್ ಅವರಿಗೆ ಕುಸೇಲ್ದರಸೆ ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಅರವಿಂದ ಬೋಳಾರ್, ಸುಂದರ ರೈ ಮಂದಾರ, ಸಾಥ್ ನೀಡಿದ್ದಾರೆ.
ಈ ಸಿನಿಮಾದಲ್ಲಿ ತಂದೆ ಕಾಪಿಕಾಡ್ ಮತ್ತು ಮಗ ಅರ್ಜುನ್ ಜೋಡಿಯೂ ನಟಿಸಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ತೆಲಿಕೆದ ಬೊಳ್ಳಿಯಲ್ಲಿ ಈ ಜೋಡಿ ಕಾಣಸಿಕ್ಕಿದ್ದು. ಮತ್ತೆ ಚಾಲಿಪೋಲಿಲು ಸಿನಿಮಾದಲ್ಲಿ ಅವರನ್ನು ಕಾಣುವ ಅವಕಾಶ ತುಳು ಚಿತ್ರಪ್ರೇಮಿಗಳಿಗೆ ಒದಗಿ ಬಂದಿದೆ ಎಂದು ಪ್ರಕಾಶ್ ಪಾಂಡೇಶ್ವರ್ ವಿವರಿಸಿದರು.