ಮಂಗಳೂರು,ಅ.07 : ಸಾವಿರಾರು ಮಂದಿಯ ಜೀವನ ಸಾಗಿಸಲು ದಾರಿಯಾಗಿದ್ದ ಮಂಗಳೂರಿನ ಪಣಂಬೂರಿನಲ್ಲಿರುವ ಎಂಸಿಎಫ್ ಕಂಪನಿಯನ್ನು ಮುಚ್ಚಲು ಹೊರಟಿರುವ ಕ್ರಮವನ್ನು ಖಂಡಿಸಿ ಎಂಸಿಎಫ್ ಕಾರ್ಮಿಕರು ಮಂಗಳವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಎಂಸಿಎಫ್ನಲ್ಲಿ ಉದ್ಯೋಗದಲ್ಲಿರುವ ಮಂಗಳಾ ಕಾರ್ಮಿಕರ ಯೂನಿಯನ್ ವತಿಯಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಕಾರ್ಮಿಕರ ಮುಖಂಡರು ಮಾತನಾಡಿ, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಎಂಸಿಎಫ್ ಕಂಪನಿಯಲ್ಲಿ ಕಾರ್ಯ ನಿರ್ವಾಹಿಸುತ್ತಿದ್ದು,ಕಂಪನಿ ಮುಚ್ಚಿದರೆ ಸಾವಿರಾರು ಮಂದಿ ಬೀದಿ ಪಾಲಾಗುತ್ತಾರೆ. ಉತ್ಪಾದನೆಗೆ ಅಗತ್ಯವಿರುವ ಕಚ್ಛಾ ವಸ್ತುಗಳನ್ನು ಪೂರೈಕೆ ಮಾಡಲಾಗದೇ ಹಿನ್ನಲೆಯಲ್ಲಿ ಹಾಗೂ ಕೃಷಿ ಭೂಮಿಗಳಲ್ಲಿ ಪೈಪ್ ಲೈನ್ ಅಳವಡಿಸಲು ಭೂಮಿ ಸ್ವಾಧೀನ ಪಡಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಕಂಪನಿ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಕಂಪನಿ ಮುಚ್ಚಿದರೆ ಕೃಷಿಯನ್ನೇ ನಂಬಿರುವ ರೈತರಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು.
ಎಂಸಿಎಫ್ ಕಂಪನಿ ಮುಚ್ಚುವ ನಿರ್ಧಾರ ಸಾವಿರಾರು ಮಂದಿಯ ಸಾವು ಬದುಕಿನ ಪ್ರಶ್ನೆಯಾಗಿರುವುದರಿಂದ ಸರ್ಕಾರ ತಕ್ಷಣ ಕಂಪನಿ ಮುಚ್ಚುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಗಳಾ ಕಾರ್ಮಿಕರ ಯೂನಿಯನ್ನ ಪಧಾಧಿಕಾರಿಗಳು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.