ಕುಂದಾಪುರ: ವೈದ್ಯರಿಗೆ ಸಾಹಿತ್ಯದ ಅಗತ್ಯತೆ ಉಳಿದವರಿಂತ ಹೆಚ್ಚಿದೆ ಎಂದರೆ ತಪ್ಪಾಗಲಾರದು. ವೈದ್ಯರಾದವರು ಅತ್ಯಂತ ಒತ್ತಡದ ಜೀವನ ನಡೆಸುತ್ತಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ತಮ್ಮ ಕುಟುಂಬಕ್ಕೂ ಕೂಡ ಸಮಯ ನೀಡುವುದು ಕಷ್ಟವೆನಿಸುತ್ತದೆ. ಸಾಹಿತ್ಯದಿಂದ ವೈದ್ಯರಿಗೆ ಈ ಒತ್ತಡದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಕುಂದಾಪುರದ ಖ್ಯಾತ ಮನೋವೈದ್ಯ ಡಾ.ಪ್ರಕಾಶ್ ತೋಳಾರ್ ಹೇಳಿದರು.
ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ, ಕೋಟತಟ್ಟು ಗ್ರಾ.ಪಂ. ಡಾ.ಶಿವರಾಮ ಕಾರಂತ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ 5 ನೇ ದಿನದ ಕಾರ್ಯಕ್ರಮದ ಅಂಗವಾಗಿ ವೈದ್ಯ ಸಾಹಿತಿಗಳ ಸಾಹಿತ್ಯ ಸಮ್ಮೇಳನ ಆಪ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೇರ ನಡೆ ನುಡಿಯಿಂದ ಕಾರಂತರು ಎಂದೆ ಎಲ್ಲೆಡೆ ಗುರುತಿಸಿಕೊಂಡಿದ್ದರು. ಅವರ ಸಮಯ ಪ್ರಜ್ಞೆ, ನೇರ ನಡೆ ನುಡಿ ನಮಗೆ ಆದರ್ಶವಾಗಬೇಕಿದೆ. ಅವರು ಪ್ರತಿ ಕಾದಂಬರಿಗಳು ನಮ್ಮ ನಡುವಿನ ಜನ ಜೀವನದ ಸಮಸ್ಯೆಗಳು ಗೊಂದಲ ಮತ್ತು ಪರಿಹಾರ ವಿಚಾರವಾಗಿದೆ ಎಂದರು.
ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಕೋಟೇಶ್ವರ ಎನ್. ಆರ್. ಆಚಾರ್ಯ ವ್ಯವಸ್ಥಾಪಕ ಡಾ. ಭಾಸ್ಕರ್ ಆಚಾರ್ಯ ಮಾತನಾಡಿ, ಪ್ರತಿಯೊಬ್ಬ ವೈದ್ಯನಿಗೂ ವೈದ್ಯಕೀಯ ಸಾಹಿತ್ಯದ ಬಗ್ಗೆ ಸಾಕಷ್ಟು ಆಸಕ್ತಿ ಇರುತ್ತದೆ. ಕೆಲಸದ ಒತ್ತಡ ಅವರಲ್ಲಿನ ಸಾಹಿತ್ಯ ಆಸಕ್ತಿಗೆ ಪೂರಕವಾಗಿಲ್ಲ. ವೈದ್ಯರು ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ, ಸಮಸ್ಯೆಗಳನ್ನು ಸಮಾನವಾಗಿ ಸ್ವೀಕರಿಸಿ ವೃತ್ತಿಯಲ್ಲಿ ಪ್ರತಿ ಹೆಜ್ಜೆಯನ್ನು ಜಾಗರೂಕತೆಯಿಂದ ಇರಿಸಿ ನಡೆದರೆ ಉತ್ತಮ ಯಶಸ್ಸು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ವಹಿಸಿದ್ದರು. ಅಖಿಲ ಭಾರತ ವೈದ್ಯಕೀಯ ಸಂಘ ಕುಂದಾಪುರ ವಲಯ, ಆಶ್ರೀತಾ ನರ್ಸಿಂಗ್ ಕಾಲೇಜು ಮತ್ತ ಜೇಸಿರೆಟ್ ಕಲ್ಯಾಣಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರದ ವೈದ್ಯ ಡಾ. ವೆಂಕಟ್ರಾಮ ಉಡುಪ, ಮನೋವೈದ್ಯ ಡಾ.ಕೆ.ಎಸ್. ಕಾರಂತ, ಕುಂದಾಪುರ ವ.ಅ.ಭಾ.ವೈ.ಸಂಘದ ಅಧ್ಯಕ್ಷ ಡಾ.ರಾಬರ್ಟ್ ರೆಬೆಲ್ಲೂ ಮತ್ತು ಡಾ.ವಾದಿರಾಜ ಉಪಸ್ಥಿತರಿದ್ದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸಾಹಿತಿ ನರೇಂದ್ರ ಕುಮಾರ್ ಕೋಟ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವೈದ್ಯ ಸಾಹಿತ್ಯದ ಪ್ರಸ್ತುತೆ, ವೈದ್ಯರ ಹಾಸ್ಯ ಪ್ರಸಂಗಗಳು ಎನ್ನುವ ಎರಡು ಅಧಿವೇಶನ ನಡೆಯಿತು.