ಮಂಗಳೂರು, ಅ.3: ಸ್ವಚ್ಛ ಪರಿಸರ ನಿರ್ಮಾಣದ ಅಂಗವಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಪರಿಸರ ಸಂರಕ್ಷಣೆಗಾಗಿ ಜಾನುವಾರುಗಳಿಗೆ ವರ್ಷಪೂರ್ತಿ ಹಸಿರು ಮೇವಿನ ಲಭ್ಯತೆಗಾಗಿ ಮೇವಿನ ಮರದ ಜಾತಿಗೆ ಸೇರಿದ ಅಧಿಕ ಪ್ರಮಾಣದ ಲವಣಾಂಶ ಮತ್ತು ವಿಟಮಿನ್ ‘ಎ’ ಹೊಂದಿರುವ ನುಗ್ಗೆ ಮತ್ತು ಅಗಸೆ ಸಸಿಗಳನ್ನು ಶೇ.50ರ ಅನುದಾನದೊಂದಿಗೆ 50,000 ಸಸಿಗಳನ್ನು ವಿತರಿಸುವ ಮೂಲಕ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಗುರುವಾರ ನೀರುಮಾರ್ಗ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಚಾಲನೆ ನೀಡಿದರು.
ಬಳಿಕ ಒಕ್ಕೂಟದ ವತಿಯಿಂದ ಮಂಗಳೂರು, ಮಣಿಪಾಲ ಡೈರಿ, ಪುತ್ತೂರು ಶೀತಲೀಕರಣ ಘಟಕಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಕಾರ್ಪೊರೇಟರ್ ಭಾಸ್ಕರ್ ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಸ್ವಚ್ಛ ಭಾರತ ನಿರ್ಮಾಣ ಮಾಡಲು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನೀರುಮಾರ್ಗ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮಾಲತಿ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ಜಿ.ಎ.ರಾಯ್ಕರ್, ಬಿ.ಎನ್.ವಿಜಯ ಕುಮಾರ್, ಡಾ.ನಿತ್ಯಾನಂದ ಭಕ್ತ, ರುದ್ರಯ್ಯ ಉಪಸ್ಥಿತರಿದ್ದರು.