ಮಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಪ್ರಧಾನಮಂತ್ರಿ ಮತ್ತು ಕೇಂದ್ರ ರೈಲ್ವೇ ಸಚಿವರ ಸೂಚನೆಯನ್ವಯ ಭಾರತೀಯ ರೈಲ್ವೇಯು ಸ್ಚಚ್ಛತಾ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಈ ಪ್ರಯುಕ್ತ ಇಂದು ಬೆಳಿಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ನಿಲ್ದಾಣಗಳ ಸ್ಟೇಷನ್ ಮಾಸ್ಟರ್ ಅವರ ನೇತ್ರತ್ವದಲ್ಲಿ ಈ ಸ್ವಚ್ಛತಾ ಕಾರ್ಯ ನೆರವೇರಿತು
ನಗರದೆಲ್ಲೆಡೆ ಸ್ವಚ್ಚತಾ ಕಾರ್ಯ :
ಮಂಗಳೂರು : ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಪ್ರಧಾನಮಂತ್ರಿಯವರ ಸೂಚನೆಯಂತೆ ನಗರದೆಲ್ಲೆಡೆಯಲ್ಲಿ ಸ್ವಚ್ಚತಾ ಕಾರ್ಯ ಆರಂಭಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೇಯರ್ ಮಹಾಬಲ ಮಾರ್ಲ ಅವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮನಪಾ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲಿಕೆ ಕಚೇರಿ ಅವರಣ ಹಾಗೂ ಸುತ್ತ ಮುತ್ತಲಿನ ಸ್ಥಳಗಳನ್ನು ಶುಚಿತ್ವಗೊಳಿಸಿದರು.
ಬಿಜೈ ಬಂಟ್ಸ್ ಸಂಘದಿಂದ ಸ್ವಚ್ಚತಾ ಕಾರ್ಯ:
ಮಂಗಳೂರು : ಬಿಜೈ ಬಂಟ್ಸ್ ಸಂಘದ ಅಶ್ರಯದಲ್ಲಿ ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ರೋಟರಿ ಕ್ಲಬ್ನಿಂದ ಸ್ವಚ್ಛತಾ ಅಭಿಯಾನ :
ಮಂಗಳೂರು ಮಹಾನಗರ ಪಾಲಿಕೆ, ರೋಟರಿ ಕ್ಲಬ್ ಆಪ್ ಮಂಗಳೂರು ಸೆಂಟ್ರಲ್, ರೋಟರಿ ಕ್ಲಬ್ ಆಪ್ ಮಂಗಳೂರು ಸಿಟಿ ಇವರ ಜಂಟಿ ಅಶ್ರಯದಲ್ಲಿ ಪೊಪೈ ಫ್ರೌಢಶಾಲೆ ಉರ್ವಾ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಮಂಗಳೂರು ಪೂರ್ವ, ಇನ್ನರ್ವೀಲ್ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ, ಸೋಮೇಶ್ವರ ಇವರ ಅಶ್ರಯದಲ್ಲಿ ಸ್ವಚ್ಛತಾ ಅಂದೋಲನ ನಡೆಯಿತು.
ದ.ಕ.ಬಿಜೆಪಿಯಿಂದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ :
ಮಂಗಳೂರು ; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅ.2ರ ಗಾಂಧಿ ಜಯಂತಿಯಿಂದ ಅ.11 ರ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದವರೆಗೆ ಮೊದಲ ಹಂತದ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ದ.ಕ.ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಕೇಂದ್ರ ಹಾಗೂ ಎಲ್ಲ ವಾರ್ಡ್ಗಳಲ್ಲಿ ಸ್ಚಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಂಗಳೂರಿನಲ್ಲಿ ನಗರದ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ನಡೆದ ಸ್ಚಚ್ಛತಾ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಮೋನಪ್ಪ ಭಂಡಾರಿ, ಸುಧೀರ್ ಕಣ್ಣೂರ್, ಮಹಿಳಾ ಘಟಕದ ಸದಸ್ಯರು ಹಾಗೂ ಮತ್ತಿತರರು ಭಾಗವಹಿಸಿದ್ದರು. ವಾರ್ಡ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಈ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿದರು.