ಮಂಗಳೂರು, ಸೆ. 27: ಸಂತ ಆ್ಯಗ್ನೆಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಕಿರು ಬಂಡವಾಳದ ಮೂಲಕ ಮಹಿಳಾ ಸಬಲೀಕರಣ- ಸವಾಲುಗಳು ಮತ್ತು ಶೋಧನೆಗಳು’ ಎಂಬ ರಾಷ್ಟ್ರ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭ ಇಂದು ನಡೆಯಿತು.
ಉದ್ಘಾಟನೆ ನೆರವೇರಿಸಿದ ಬಜ್ಪೆ ಪೊರ್ಕೋಡಿ ಸಿಂಚನ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ಶೆಟ್ಟಿ, ಮಹಿಳೆ ಮನಸ್ಸು ಮಾಡಿದಲ್ಲಿ ಸ್ವಸ ಹಾಯ ಸಂಘಗಳ ಮೂಲಕ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು. ನೀತಿನಿಯಮ, ಕಟ್ಟುಪಾಡುಗಳ ನಡುವೆಯೂ ಸಾಮೂಹಿಕವಾಗಿ ಸಂಘಟಿತರಾದರೆ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದ ಅವರು, ಸ್ವತಃ ತಾನು ಸ್ವಸಹಾಯ ಸಂಘಗಳಲ್ಲಿ ಗುರುತಿಸಿಕೊಂಡು ಜೀವನದಲ್ಲಿ ಅಭಿವೃದ್ಧಿ ಹೊಂದಿರುವುದಾಗಿ ಹೇಳಿದರು.
ಸ್ವಂತ ಉದ್ದಿಮೆಗಳಲ್ಲಿ ತೊಡಗಿಸಿ ಕೊಂಡು ಬೆಳೆದ ಅನೇಕ ಮಹಿಳೆಯರ ಯಶಸ್ಸಿನ ಗಾಥೆ ನಮ್ಮ ಮುಂದಿದೆ. ಸವಾಲು ಮತ್ತು ಅಡೆತಡೆಗಳನ್ನು ಎದುರಿಸಿಕೊಂಡು ಮುನ್ನುಗ್ಗಿದ್ದಾಗ ಮಹಿಳೆ ಆರ್ಥಿಕವಾಗಿ ಸಶಕ್ತಳಾಗಲು ಸಾಧ್ಯ ಎಂದು ಡಿಐಸಿ ಮಂಗಳೂರು ಇದರ ಜಂಟಿ ವ್ಯವಸ್ಥಾಪಕ ಎಸ್. ಜಿ. ಹೆಗ್ಡೆ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಥರ್ಡ್ ಸೆಕ್ಟರ್ ಕಾರ್ಯನಿರ್ವಾಹಕ ಪ್ರೊ. ಯಶವಂತ ಡೊಂಗ್ರೆ ದಿಕ್ಸೂಚಿ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಎಂ. ಪ್ರೇಮ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯನಿರ್ವಾಹಕಿ ಸಿ.ಎಂ. ಸುಪ್ರಿಯಾ ಸ್ವಾಗತಿಸಿದರು.