ಬೆಳ್ತಂಗಡಿ, ಸೆ.26: ಬೇಲಿಯಲ್ಲಿದ್ದ ತಂತಿಗೆ ಸಿಲುಕಿ ಗಾಯಗೊಂಡ ಸ್ಥಿತಿಯಲ್ಲಿ ಚಿರತೆ ಪತ್ತೆಯಾದ ಘಟನೆ ಮಚ್ಚಿನ ಗ್ರಾಮದ ತಾರೆಮಾರು ಸಮೀಪದ ಕುಂಡಡ್ಕ ಎಂಬಲ್ಲಿ ಶುಕ್ರವಾರ ನಡೆದಿದೆ.
ಕಳೆದ ರಾತ್ರಿ ಆಹಾರ ಹುಡುಕುತ್ತಾ ಬಂದಿದ್ದ ಚಿರತೆ ತೋಟಕ್ಕೆ ಹಾಕಲಾಗಿದ್ದ ತಂತಿ ಬೇಲಿಗೆ ಸಿಲುಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀ ಯರೊಬ್ಬರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಬಳಿಕ ಪಿಲಿಕುಳದಿಂದ ಡಾ.ವಿಭಾ, ಸೈಂಟಿಫಿಕ್ ಅಧಿಕಾರಿ ವಿಕ್ರಮ್ ಮತ್ತು ಕೇರ್ ಟೇಕರ್ ದಿನೇಶ್ರನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು. ಅವರು ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಆ ಬಳಿಕ ಅದನ್ನು ಬೇಲಿಯಿಂದ ಬಿಡಿಸಿದರು. ವಾಮದಪದವಿನಿಂದ ಬೋನನ್ನು ತರಿಸಲಾಯಿತು. ಸುಮಾರು 10 ವರ್ಷ ಪ್ರಾಯದ 40 ಕೆ.ಜಿ. ತೂಕದ ಚಿರತೆಯನ್ನು ಬಳಿಕ ಚಿಕಿತ್ಸೆಗಾಗಿ ಪಿಲಿಕುಳ ನಿಸರ್ಗ ಧಾಮಕ್ಕೆ ಸಾಗಿಸಲಾಯಿತು.