ಮಂಗಳೂರು: ಬೈಕಿನಲ್ಲಿ ಬಂದ ಮೂವರ ತಂಡವೊಂದು ಯುವಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಸೋಮವಾರ ಸಂಜೆ ನಗರದ ವೆಲೆನ್ಸಿಯಾ ಬಳಿಯ ಗೋರಿಗುಡ್ಡದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಿಜಾರು ಎಡಪದವು ಸಮೀಪದ ಕುಂಡೊಟ್ಟು ನಿವಾಸಿ ಮೋಹನ ಶೆಟ್ಟಿ ಅವರ ಪುತ್ರ ದುರ್ಗಾಪ್ರಸಾದ್ ಶೆಟ್ಟಿ (27) ಎಂದು ಗುರುತಿಸಲಾಗಿದೆ.
ದುರ್ಗಾಪ್ರಸಾದ್ ಶೆಟ್ಟಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗೋರಿಗುಡ್ಡೆ ಬಳಿಯ ಸ್ಮಶಾನದ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ಬಲ ಬದಿಯ ಕಿಡ್ನಿ ಭಾಗಕ್ಕೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಉಳಿದಂತೆ ಕೈಗೆ, ಕಾಲಿಗೆ ತಿವಿದ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡು ರಸ್ತೆ ಬದಿ ಚರಂಡಿ ಪಕ್ಕ ಬಿದ್ದು ಒದ್ದಾಡುತ್ತಿದ್ದ ಈತನನ್ನು ಸಾರ್ವಜನಿಕರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಆತ ಕೊನೆಯುಸಿರೆಳೆದಿದ್ದಾನೆ.
ಬಡ್ಡಿ ವ್ಯವಹಾರವೇ ಮುಳುವಾಯಿತೇ…
ದುರ್ಗಾಪ್ರಸಾದ್ ಶೆಟ್ಟಿ ಬೈಕಂಪಾಡಿಯ ಚಿಟ್ ಫಂಡ್ ಸಂಸ್ಥೆಯೊಂದಕ್ಕೆ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ. ಆದರೆ ಇದರ ಜತೆಯಲ್ಲೇ ಇತರರಿಂದ ಹಣ ಪಡೆದು ಅದನ್ನು ಅಧಿಕ ಬಡ್ಡಿಗೆ ನೀಡುತ್ತಿದ್ದ. ಈ ವ್ಯವಹಾರವೇ ಆತನಿಗೆ ಮುಳುವಾಗಿದೆ ಎಂದು ಆತನ ಮಿತ್ರರು ಹೇಳುತ್ತಿದ್ದರು. ಆತ ಸಾಲವಾಗಿ ಪಡೆದುಕೊಂಡ ಹಣವೇ ಅಧಿಕವಾಗಿ ಸಾಲಗಾರರು ಆತನನ್ನು ಪೀಡಿಸುತ್ತಿದ್ದರು.
ಪಡೆದ ಸಾಲಕ್ಕೆ ಆತ ಕೆಲವರಿಗೆ ಚೆಕ್ ನೀಡಿದ್ದು, ಇದರಲ್ಲಿ ಕೆಲವು ಚೆಕ್ಗಳು ಬೌನ್ಸ್ ಆಗಿತ್ತು. ಇದು ಬಿಟ್ಟರೆ ಆತ ಯಾವುದೇ ಕೆಟ್ಟ ಕೆಲಸಗಳಲ್ಲಿ ಭಾಗಿಯಾದ ಉದಾಹರಣೆ ಇಲ್ಲ ಎಂದು ಆತನ ಸಂಬಂಧಿಕರು ಹೇಳುತ್ತಾರೆ. ಇತ್ತೀಚೆಗಷ್ಟೇ ಆತ ಚಿಂಟ್ ಫಂಡ್ನಿಂದ ಹಣ ಪಡೆದು ಲಕ್ಷಾಂತರ ರೂ. ಸಾಲವನ್ನು ಸಂದಾಯ ಮಾಡಿದ್ದ ಎಂದು ಆತನ ಮಿತ್ರರು ಹೇಳುತ್ತಾರೆ. ಆದರೆ, ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ದುರ್ಗಾಪ್ರಸಾದ್ ಶೆಟ್ಟಿ ಚಿಟ್ ಫಂಡ್ ವ್ಯವಹಾರ ನಡೆಸಲು ಆರಂಭಿಸಿದ ಬಳಿಕ ಮನೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಕಳೆದ ಮೂರು ತಿಂಗಳಿಂದ ಮನೆಗೆ ಬಂದಿರಲಿಲ್ಲ ಎಂದು ಅವರ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವಿವಾಹಿತರಾಗಿರುವ ಅವರ ಮೇಲೆ ಕೆಲವು ಚೆಕ್ಬೌನ್ಸ್ ಆರೋಪಗಳು ಇವೆ. ಆದರೆ ಯಾವುದೇ ಠಾಣೆಯಲ್ಲಿ ಕೇಸುಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಆರ್. ಹಿತೇಂದ್ರ, ಡಿಸಿಪಿ ಡಾ. ಕೆ.ವಿ. ಜಗದೀಶ್, ಪಾಂಡೇಶ್ವರ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ, ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಆತನ ಸ್ನೇಹಿತರ ಬಳಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸತತ 2 ದಿನದಲ್ಲಿ 2 ಕೊಲೆ:
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ದಿನದಲ್ಲಿ ಎರಡು ಕೊಲೆಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಬಾನುವಾರ ಮುಂಜಾನೆ ೨.೩೦ರ ಸುಮಾರಿಗೆ ಬಿಜೈಯ ಚಂದ್ರಿಕಾ ಲೇಔಟ್ನಲ್ಲಿ, ಮೆಸ್ಕಾಂನ ಹಿರಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್ ಕೆ. (56) ಅವರನ್ನು ಅವರ ಮನೆಯಲ್ಲೇ ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದರು. ಕೊಲೆಗಾರರು ಯಾರು ಎನ್ನುವುದು ಇನ್ನೂ ನಿಗೂಢವಾಗಿದೆ. ಇದೀಗ ಸೋಮವಾರ ಸಂಜೆ 3 ಗಂಟೆ ವೇಳೆಗೆ ಗೋರಿಗುಡ್ಡದಲ್ಲಿ ಮಿಜಾರು ಎಡಪದವಿನ ದುರ್ಗಾಪ್ರಸಾದ್ ಶೆಟ್ಟಿ ಎಂಬಾತನ ಕೊಲೆಯಾಗಿದೆ. ಈ ರೀತಿ ಸತತ 2 ದಿನದಲ್ಲಿ 2 ಕೊಲೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡುವಂತಾಗಿದೆ.