ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (MESCOM) ನ ಎಂಜನಿಯರ್ ರೋರ್ವರನ್ನು ಅವರ ಮನೆಯ ಬೆಡ್ ರೂಮ್ನಲ್ಲೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ರವಿವಾರ ಮುಂಜಾನೆ ಕದ್ರಿ ಕಂಬಳದಲ್ಲಿ ನಡೆದಿದೆ.ಮೆಸ್ಕಾಂ ನ ಹಿರಿಯ ಕಾರ್ಯಕಾರಿ ಎಂಜನಿಯರ್ ಜಗದೀಶ್ ರಾವ್ (53) ಎಂಬವರನ್ನು ಅವರ ಮನೆಯ ಒಳಗೆ ಪ್ರವೇಶಿಸಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮುಂಜಾನೆ 2:30ರ ಸುಮಾರಿಗೆ ನಾನು ಗಾಢ ನಿದ್ದೆಯಲ್ಲಿರುವಾಗ ಪತಿ ಜೋರಾಗಿ ಕೂಗುತ್ತಿರುವುದು ಕೇಳಿಸಿತ್ತು. ಎದ್ದು ನೋಡಿದರೆ ಅವರು ರಕ್ತದ ಮಡವಿನಲ್ಲಿ ಬಿದ್ದಿದ್ದರು. ಅಗಲೇ ಇಬ್ಬರು ಮಾಳಿಗೆಯಿಂದ ಇಳಿದು ಓಡುತ್ತಿರುವುದು ಕಾಣಿಸಿತ್ತು. ಕೂಡಲೇ ಪರಿಚಯದ ವೈದ್ಯರಿಗೆ ಕರೆ ಮಾಡಿದ್ದೆ, ವೈದ್ಯರು 10 ನಿಮಿಷದಲ್ಲಿ ಬಂದಿದ್ದರು. ಆದರೆ ಅಷ್ಟೊತ್ತಿಗೆ ಜಗದೀಶ್ರವರು ಕೊನೆಯುಸಿರು ಎಳೆದಿದ್ದರು ಎಂದು ಅವರ ಪತ್ನಿ ಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟೇರಸ್ ಬಾಗಿಲು ಹಾಕಿರಲಿಲ್ಲ. ದುಷ್ಕರ್ಮಿ ಅದೇ ಮಾರ್ಗದಲ್ಲಿ ಮನೆಯೊಳಗೆ ಬಂದು ಕೊಲೆ ಮಾಡಿ ಅಲ್ಲಿಂದಲೇ ಪರಾರಿಯಾಗಿದ್ದಾರೆ ಎಂದು ಭಾರತಿ ತಿಳಿಸಿದ್ದಾರೆ.
ಭಾರತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯಲ್ಲಿದ್ದ ವೈದ್ಯ ಗಣೇಶ್ ಎಂಬವರು ಹೊರಗೆ ಬಂದಿದ್ದರು. ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ದುಷ್ಕರ್ಮಿಗಳು ಗುಂಡಿನ ಸದ್ದು ಕೇಳಿ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ ಜಗದೀಶರ ಕುತ್ತಿಗೆಗೆ ಹರಿತ ಆಯುಧದಿಂದ ಕಡಿದಿರುವ ದುಷ್ಕರ್ಮಿಗಳು ಪಕ್ಕದಲ್ಲಿಯೇ ಮಲಗಿದ್ದ ಆವರ ಪತ್ನಿಗೆ ಯಾವುದೇ ಹಾನಿ ಮಾಡಿಲ್ಲ.
ಮಾಹಿತಿ ತಿಳಿದ ಪೊಲೀಸರು ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಡಿಸಿಪಿ ಜಗದೀಶ್, ಎಸಿಪಿ ತಿಲಕ್ ಚಂದ್ರ, ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರೀಶೀಲನೆಯಲ್ಲಿ ತೊಡಗಿದ್ದಾರೆ. ಜಗದೀಶರ ಒಬ್ಬಳೇ ಪುತ್ರಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಶವಾಗಾರಕ್ಕೆ ಸಾಗಿಸಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.