ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಚರಣೆಯಲ್ಲಿ ಮತ್ತೊಮ್ಮೆ ಅಕ್ರಮ ಚಿನ್ನ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. ಶನಿವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದುಬ್ಯಾಯಿಂದ ಬಂದ ಇಬ್ಬರು ವಿಮಾನ ಯಾನಿಗಳಿಂದ ಒಟ್ಟು 878 ಗ್ರಾಂ ತೂಕದ 23,48,650 ರೂ. ಮೌಲ್ಯದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳದ ಕಾಸರಗೋಡಿನ ಕೂಡ್ಲು ಪಾರೆಕಟ್ಟೆಯ ಮಹಮದ್ ಅಶ್ರಫ್ ಮತ್ತು ತಲಂಗರೆಯ ಕಡವತ್ ನಿವಾಸಿ ಸುಹೈಬ್ ತಲಂಗರ ಮೊಹಮೂದ್ ಎಂದು ಹೆಸರಿಸಲಾಗಿದೆ.
ಪಾರೆಕಟ್ಟೆ ಮೊಹಮದ್ ಅಶ್ರಫ್ ಬೆಳಗ್ಗೆ 4.45ಕ್ಕೆ ಬಂದಿಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ್ದು, ಅವರ ಬ್ಯಾಗ್ ಪರಿಶೋಧಿಸಿದಾಗ 11,66,300 ರೂ. ಬೆಲೆ ಬಾಳುವ 436 ಗ್ರಾಂ ಚಿನ್ನ ಪತ್ತೆಯಾಗಿದೆ.
ಸುಹೈಬ್ ತಲಂಗರ ಮೊಹಮೂದ್ ಬೆಳಗ್ಗೆ 8.45ಕ್ಕೆ ಬಂದಿಳಿದ ಜೆಟ್ ಏರ್ವೆàಸ್ ವಿಮಾನದಲ್ಲಿ ಆಗಮಿಸಿದ್ದು, ಅವರ ಬ್ಯಾಗ್ನಲ್ಲಿ 442 ಗ್ರಾಂ ತೂಕದ 11,82,350 ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.
ಇಬ್ಬರೂ ಆರೋಪಿಗಳು ಚಿನ್ನವನ್ನು ವೈರ್ ರಾಡ್, ಮಣಿಗಳು ಮತ್ತು ವಿವಿಧ ತುಣುಕುಗಳ ಆಕಾರದಲ್ಲಿ ವಾಚ್ ಸ್ಟ್ರಾಪ್, ಆಟಿಕೆ ಕಾರುಗಳು, ಪೆನ್ ರೀಫಿಲ್, ಎಲೆಕ್ಟ್ರಿಕ್ ಪ್ಲಗ್, ಕೀ ಚೈನ್, ಆಯಸ್ಕಾಂತದ ರಿಸ್ಟ್ ಬ್ಯಾಂಡ್, ಫ್ಯಾನ್ಸಿ ಚೈನ್/ ಬ್ರಾಸ್ಲೆಟ್, ಅಲರಾಂ ಕ್ಲಾಕ್, ಝಿಪ್ ಹೋಲ್ಡರ್ (ಪುಲ್ಲರ್)ಗಳಲ್ಲಿ ಅಡಗಿಸಿಟ್ಟಿದ್ದರು.
ಇದು ಚಿನ್ನವನ್ನು ಅಕ್ರಮವಾಗಿ ಸಾಗಿಸುವ ಹೊಸ ತಂತ್ರಗಾರಿಕೆ ಆಗಿರುತ್ತದೆ. ಇಬ್ಬರೂ ಬೇರೆ ಬೇರೆ ವಿಮಾನಗಳಲ್ಲಿ ಪ್ರಯಾಣಿಸಿದ್ದರೂ ಚಿನ್ನ ಸಾಗಾಟಕ್ಕೆ ಒಂದೇ ರೀತಿಯ ತಂತ್ರಗಾರಿಕೆಯನ್ನು ಅನುಸರಿಸಿರುವುದನ್ನು ಗಮನಿಸಿದರೆ ಪರಸ್ಪರ ಮಾತುಕತೆ ಮಾಡಿಕೊಂಡು ದುಬಾಯಿಂದ ವಿಮಾನ ಹತ್ತಿರಬಹುದೇ ಎಂಬ ಸಂಶಯ ಉಂಟಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಕೃಷ್ಣ ಕುಮಾರ್ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಯಿತು.