ಅಂತರಾಷ್ಟ್ರೀಯ

ಭಾರತ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಕೂಡ ಪ್ರತ್ಯುತ್ತರ ನೀಡುತ್ತೇವೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

Pinterest LinkedIn Tumblr

ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವುದಾದರೆ, ಅದು ನಮ್ಮಿಂದ ಸಾಧ್ಯವಿಲ್ಲವೇ.. ನಮ್ಮ ಮೇಲೆ ದಾಳಿಯಾದರೆ ಖಂಡಿತಾ ನಾವೂ ಕೂಡ ಅದೇ ಮಾದರಿಯಲ್ಲೇ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪುಲ್ವಾಮ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ರೇಡಿಯೋದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಭಾರತ ಸರ್ಕಾರ ವಿನಾಕಾರಣ ಪಾಕಿಸ್ತಾನವನ್ನು ದೂಷಣೆ ಮಾಡುತ್ತಿದೆ. ಪುಲ್ವಾಮ ಉಗ್ರ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದು ಭಾರತ ಸರ್ಕಾರಕ್ಕೆ ಸಮಾನ್ಯವಾಗಿ ಬಿಟ್ಟಿದೆ. ಹಿಂಸಾಚಾರವನ್ನು ಪಸರಿಸುವುದು ನಮ್ಮ ನೆಲದ ಗುಣವಲ್ಲ. ಇದು ನಮ್ಮ ಸರ್ಕಾರದ ಮುಖ್ಯ ದ್ಯೇಯೋದ್ದೇಶ ಕೂಡ ಆಗಿದೆ ಎಂದು ಹೇಳಿದರು.

ಅಂತೆಯೇ, ಒಂದು ವೇಳೆ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕ್ ಮೂಲದವರ ಕೈವಾಡವಿದ್ದರೆ ಖಂಡಿತಾ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅದು ಯಾರೇ ಆದರೂ ಅವರ ಬಿಡುವ ಪ್ರಶ್ನೆಯೇ ಇಲ್ಲ. ಭಾರತದಲ್ಲಿ ದಾಳಿ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಲಾಭವಿಲ್ಲ. ಅದರಿಂದ ನಮಗೆ ಏನೂ ಆಗಬೇಕಿಲ್ಲ. ಭಾರತ ಸರ್ಕಾರ ಕೂಡ ಈ ಬಗ್ಗೆ ಕೊಂಚ ಆಲೋಚನೆ ಮಾಡಬೇಕು. ಭಾರತದ ಮೇಲೆ ದಾಳಿ ಮಾಡುವುದರಿಂದ ಪಾಕಿಸ್ತಾನಕ್ಕೆ ಏನು ಲಾಭ… ನೀವೇ ಒಮ್ಮೆ ಯೋಚನೆ ಮಾಡಿ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ಪ್ರತಿದಾಳಿ ನಮ್ಮಿಂದ ಸಾಧ್ಯವಿಲ್ಲವೇ, ನಮ್ಮ ಭದ್ರತೆಗೆ ಧಕ್ಕೆಯಾದರೆ, ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾವೂ ಕೂಡ ಪ್ರತಿದಾಳಿ ಮಾಡುತ್ತೇವೆ ಎಂಬುದನ್ನು ಭಾರತ ಸರ್ಕಾರ ಮರೆಯಬಾರದು. ಈಗಲೂ ನಮ್ಮ ಮನಸ್ಸಿನಲ್ಲಿ ದಾಳಿಯ ಉದ್ದೇಶವಿಲ್ಲ. ನಮಗೆ ತಿಳಿದಿದೆ ಯುದ್ಧ ಆರಂಭ ಮಾತ್ರ ನಮ್ಮ ಕೈಯಲ್ಲಿರುತ್ತದೆ. ಮುಕ್ತಾಯವಲ್ಲ. ಮುಕ್ತಾಯವೇನಿದ್ದರೂ ದೇವರಿಗೇ ಗೊತ್ತು. ಈ ಸಮಸ್ಯೆಯನ್ನು ಕೇವಲ ಮಾತುಕತೆಯಿಂದ ಮಾತ್ರ ಬಗೆಹರಿಸಿಕೊಳ್ಳಬೇಕು ಎಂದು ಇಮ್ರಾನ್ ಖಾನ್ ಹೇಳಿದರು.

Comments are closed.