ಬೀಜಿಂಗ್: ಟಿಬೆಟ್ ಮಾರ್ಗದ ಮೂಲಕ ಬ್ರಹ್ಮಪುತ್ರ ನದಿ ನೀರನ್ನು ಕ್ಸಿನ್ಜಿಯಾಂಗ್ ಪ್ರಾಂತ್ಯಕ್ಕೆ ಸಾಗಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಅರುಣಾಚಲ ಪ್ರದೇಶಕ್ಕೆ ಹತ್ತಿರುವ ಟಿಬೆಟ್ನ ಸಾಂಗ್ರಿ ಪ್ರಾಂತ್ಯದಿಂದ ಬ್ರಹ್ಮಪುತ್ರ ನದಿ ನೀರನ್ನು 1000 ಕಿ.ಮೀ ಉದ್ದದ ಸುರಂಗ ಮಾರ್ಗದ ಮುಖಾಂತರ ಕ್ಸಿನ್ಜಿಯಾಂಗ್ ಪ್ರಾಂತ್ಯಕ್ಕೆ ಸಾಗಿಸುವ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು. ಇದಕ್ಕೆ ಭಾರಿ ವಿರೋಧಗಳು ವ್ಯಕ್ತವಾಗಿದ್ದವು.
ಚೀನಾ ಭಾರಿ ಯೋಜನೆ ಸಿದ್ಧಪಡಿಸಿದ್ದು, ಅದರ ಪೂರ್ವಭಾವಿ ತಯಾರಿ ನಡೆಸಿದೆ ಎಂದು ಹಾಂಕಾಂಗ್ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ‘ ಪತ್ರಿಕೆ ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ವರದಿ ಸಂಪೂರ್ಣ ಆಧಾರರಹಿತ ಯಾವುದೇ ಪುರಾವೆಗಳು ಇಲ್ಲದ್ದು ಎಂದು ಚೀನಾ ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್ ಸ್ಪಷ್ಟಪಡಿಸಿದ್ದಾರೆ.
ಗಡಿ ನದಿ ನೀರು ಹಂಚಿಕೆ ಸಹಕಾರಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಬ್ರಹ್ಮ ಪುತ್ರ ನದಿಗೆ ಜಲಸುರಂಗ ನಿರ್ಮಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಅವರು ಹೇಳಿದ್ದಾರೆ.
Comments are closed.