ಕರಾಚಿ: ಡಿಸೆಂಬರ್ ತಿಂಗಳಲ್ಲಿ ನವದೆಹಲಿ ಅಥವಾ ಜೈಪುರದಲ್ಲಿ ಸಂಗೀತ ಕಚೇರಿ ನಡೆಸಲು ಒಪ್ಪಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಪಾಕಿಸ್ತಾನದ ಗಜಲ್ ಗಾಯಕ ಗುಲಾಂ ಅಲಿ ಹೇಳಿದ್ದಾರೆ.
ನಾನು ಭಾರತದಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ದಿನಾಂಕ ನಿಗದಿ ಮಾಡಿದ್ದೇನೆ ಎಂದು ಯಾರಾದರೂ ಹೇಳಿದರೆ, ಆ ದಿನವನ್ನು ಅವರೇ ನಿಗದಿಪಡಿಸಿರಬೇಕು. ಮುಂದಿನ ತಿಂಗಳು ಜೈಪುರದಲ್ಲಿ ಕಾರ್ಯಕ್ರಮ ನಡೆಸುತ್ತೇನೆ ಎಂದು ನಾನು ಯಾರಿಗೂ ಮಾತು ಕೊಟ್ಟಿಲ್ಲ ಎಂದು ನಿನ್ನೆ ರಾತ್ರಿ ಸುದ್ದಿ ಮಾಧ್ಯಮವೊಂದಲ್ಲಿ ಮಾತನಾಡಿದ ಗುಲಾಂ ಅಲಿ ಹೇಳಿದ್ದಾರೆ.
ಶಿವಸೇನೆಯ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯಬೇಕಿದ್ದ ಸಂಗೀತ ಕಾರ್ಯಕ್ರಮವನ್ನು ಅಲಿ ರದ್ದುಗೊಳಿಸಿದ್ದರು. ಅದರೊಂದಿಗೆ ನವೆಂಬರ್ 8ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನೂ ರದ್ದುಗೊಳಿಸಿದ್ದರು.
ಸಧ್ಯಕ್ಕೆ, ನಾನು ಭಾರತದಲ್ಲಿ ಯಾವುದೇ ಸಂಗೀತ ಕಾರ್ಯಕ್ರಮದ ಯೋಜನೆ ನಡೆಸಿಲ್ಲ. ಅಲ್ಲೀಗ ನನ್ನ ಕಾರ್ಯಕ್ರಮ ನಡೆಸುವುದಕ್ಕೆ ಇದು ಸೂಕ್ತ ಸಮಯ ಎಂದು ನನಗೆ ಅನಿಸುವುದಿಲ್ಲ. ಭಾರತಕ್ಕೆ ಹೋಗಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಅಲಿ ಹೇಳಿದ್ದಾರೆ.