ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ಸಂಚುಕೋರ, ಲಷ್ಕರ್–ಎ ತಯಬಾ (ಎಲ್ಇಟಿ) ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿ ರಾವಲ್ಪಿಂಡಿಯ ಕಾರಾಗೃಹದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಈತನನ್ನು ಇರಿಸಿರುವ ಕೊಠಡಿಯಲ್ಲಿ ಅಂತರ್ಜಾಲ, ಮೊಬೈಲ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ಅತಿಥಿಗಳನ್ನು ಭೇಟಿ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಅಲ್ಲಿನ ಸರ್ಕಾರದ ಹೇಳಿಕೆಗೆ ತದ್ವಿರುದ್ಧವಾಗಿ ಉಗ್ರನಿಗೆ ಸೌಲಭ್ಯ ಒದಗಿಸಲಾಗಿದೆ.
ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಭಾರಿ ಭದ್ರತೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಬಿಬಿಸಿ ಉರ್ದು ವಾಹಿನಿ ವರದಿ ಮಾಡಿದೆ.ಲಖ್ವಿ ಜತೆ ಇತರ 6 ಸಹ ಆರೋಪಿಗಳ ವಿರುದ್ಧ 2008 ರಲ್ಲಿ ಮುಂಬೈ ಮೇಲೆ ನಡೆಸಿದ ಉಗ್ರರ ದಾಳಿಯ ಗಂಭೀರ ಆರೋಪವಿದೆ. ಇಷ್ಟಾದರೂ ಸರ್ಕಾರ ಲಖ್ವಿ ಮತ್ತು ಇತರ ಆರೋಪಿಗಳಿಗೆ ಕಾರಾಗೃಹದಲ್ಲಿ ಜೈಲು ಅಧೀಕ್ಷಕರ ಕಚೇರಿ ಕೊಠಡಿಯ ಪಕ್ಕದಲ್ಲೇ ಹಲವು ಕೊಠಡಿಗಳನ್ನು ಒದಗಿಸಿ ಸೌಲಭ್ಯ ನೀಡಿದೆ.
‘ಟಿ.ವಿ, ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಸಂಪರ್ಕ ಅಲ್ಲದೆ ದಿನಕ್ಕೆ ಯಾವುದೇ ಸಂಖ್ಯೆಯ ಅತಿಥಿಗಳ ಭೇಟಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ’ ಎಂದು ಬಿಬಿಸಿ ವರದಿ ಮಾಡಿದೆ. ‘ಲಖ್ವಿಗೆ ಎಷ್ಟು ಅತಿಥಿಗಳನ್ನಾದರೂ ದಿನದ ಯಾವ ಸಮಯದಲ್ಲಾದರೂ ಭೇಟಿ ಮಾಡುವ ಅವಕಾಶ ನೀಡಲಾಗಿದೆ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೆಲ್ಲ ಯಾವುದೇ ಅನುಮತಿ ಪಡೆಯಬೇಕಿಲ್ಲ. ಅತಿಥಿಗಳು ತಮ್ಮ ಗುರುತನ್ನು ಜೈಲಿನ ಅಧಿಕಾರಿಗಳಿಗೆ ತಿಳಿಸಬೇಕಾಗಿಲ್ಲ. ‘ಲಖ್ವಿ ರೀತಿ ಜೈಲಿನಲ್ಲಿ ಸಕಲ ಸೌಲಭ್ಯದೊಂದಿಗೆ ಜೀವನ ಮಾಡುವುದನ್ನು ಬೇರೆ ಕಡೆ ಊಹಿಸಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಕೆಲವು ಉಗ್ರ ಸಂಘಟನೆ ಕಮಾಂಡರ್ಗಳಿಗೆ ಸೌಲಭ್ಯ ನೀಡಿ ಸಾಕುತ್ತದೆ. ಭವಿಷ್ಯದಲ್ಲಿ ಅವರ ನೆರವು ಪಡೆಯಲು ಈ ರೀತಿ ಮಾಡಲಾಗುತ್ತದೆ’ ಎಂದು ವಾಹಿನಿ ಹೇಳಿದೆ. ‘ಭೇಟಿ ಮಾಡಲು ಬರುವವರನ್ನು ಲಖ್ವಿ ಇರುವ ಸ್ಥಳಕ್ಕೆ ಭದ್ರತೆಯಲ್ಲಿ ಕರೆದೊಯ್ಯಲಾಗುತ್ತದೆ.
ಅತಿಥಿಗಳು ಎಷ್ಟು ಹೊತ್ತಾದರೂ ಆತನೊಂದಿಗೆ ಇರಬಹುದು’ ಎಂದು ವಾಹಿನಿ ಜೈಲಿನ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.ಲಷ್ಕರ್ ಎ ತಯಬಾ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್ ಆಪ್ತನಾದ ಲಖ್ವಿಯನ್ನು 2008 ರ ಡಿಸೆಂಬರ್ನಲ್ಲಿ ಬಂಧಿಸಲಾಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಈತನ 6 ಜನ ಸಹಚರರನ್ನು 2009ರ ನವೆಂಬರ್ನಲ್ಲಿ ಬಂಧಿಸಲಾಯಿತು. 2009ರಿಂದ ಲಖ್ವಿಯನ್ನು ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಇರಿಸಲಾಗಿದೆ.