ರಾಷ್ಟ್ರೀಯ

CM ಉದ್ಧವ್ ಠಾಕ್ರೆಗೆ ಕಪಾಳ ಮೋಕ್ಷ ಮಾಡುತ್ತಿದ್ದೆ ಎಂಬ ಹೇಳಿಕೆ; ಕೇಂದ್ರ ಸಚಿವ ರಾಣೆಗೆ ಮಧ್ಯರಾತ್ರಿ ಜಾಮೀನು

Pinterest LinkedIn Tumblr

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳ ಮೋಕ್ಷ ಮಾಡುತ್ತಿದ್ದೆ ಎಂಬ ವಿವಾದಾತ್ಮಕ ಹೇಳಿಕೆ ಬಳಿಕ ಬಂಧನಕ್ಕೆ ಒಳಗಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಮಂಗಳವಾರ ಮಧ್ಯರಾತ್ರಿ ವೇಳೆ ಜಾಮೀನು ದೊರಕಿದೆ. ರಾಣೆ ವಿರುದ್ಧ ನಾಲ್ಕು ಕಡೆ ಎಫ್‌ಐಆರ್‌ಗಳು ದಾಖಲಾಗಿದ್ದವು. ಅವರಿಗೆ ಬಂಧನದಿಂದ ರಕ್ಷಣೆ ನೀಡುವ ನಿರೀಕ್ಷಣಾ ಜಾಮೀನು ನೀಡಲು ರತ್ನಗಿರಿ ನ್ಯಾಯಾಲಯ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಅವರನ್ನು ಬಂಧಿಸಲಾಗಿತ್ತು.

ರಾಣೆ ಅವರ ಬಂಧನ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅವರನ್ನು ಮಂಗಳವಾರ ರಾತ್ರಿ ಮಹದ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರು ಪ್ರಕರಣದ ದಿನಚರಿಯನ್ನು ದಾಖಲಿಸುವುದು ಇದರಲ್ಲಿ ಕಡ್ಡಾಯವಾಗಿಲ್ಲ ಹಾಗೂ ರಾಣೆ ಅವರನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತಮ್ಮ ಆದೇಶದಲ್ಲಿ ಹೇಳಿದರು.

ರಾಣೆ ಅವರ ಪ್ರಕರಣದ ವಿಚಾರಣೆ ರಾತ್ರಿ 9.30ಕ್ಕೆ ಆರಂಭವಾಗಿತ್ತು. ಮಧ್ಯರಾತ್ರಿಯ ವೇಳೆ ಅವರಿಗೆ 15,000 ರೂ ಬಾಂಡ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಯಿತು. ಆಗಸ್ಟ್ 30 ಹಾಗೂ ಸೆಪ್ಟೆಂಬರ್ 13ರಂದು ಮಹದ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅವರಿಗೆ ಷರತ್ತು ವಿಧಿಸಲಾಗಿದೆ. ಜತೆಗೆ ಅವರ ಧ್ವನಿ ಮಾದರಿಗಾಗಿ ಏಳು ದಿನಗಳ ನೋಟಿಸ್ ಹೊರಡಿಸಲು ಪೊಲೀಸರಿಗೆ ಸೂಚಿಸಲಾಗಿದೆ.

ರಾಣೆ ಅವರನ್ನು ಏಳುದಿನಗಳ ವಶಕ್ಕೆ ಮತ್ತು ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸರ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. ಜಾಮೀನು ದೊರಕಿದೆ ಬಳಿಕ ‘ಸತ್ಯಮೇವ ಜಯತೇ’ ಎದು ರಾಣೆ ಟ್ವೀಟ್ ಮಾಡಿದ್ದಾರೆ.

ರಾಣೆ ಪ್ರಕರಣವನ್ನು ಅವರ ಬಂಧನಕ್ಕೂ ಮುನ್ನ ತ್ವರಿತ ವಿಚಾರಣೆಗಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ವಕೀಲ ಅನಿಕೇತ್ ನಿಕಂ ಪ್ರಯತ್ನಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬುಧವಾರ ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದು, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರುತ್ತೇವೆ. ಬಂಧನದ ಮಾನ್ಯತೆ ಹಾಗೂ ಅವರ ವಿರುದ್ಧದ ವಿಚಾರಣೆಗಳನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ರಾಣೆ ಅವರ ಬಂಧನ ರಾಜಕೀಯ ಪ್ರೇರಿತ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವೇ ಇಲ್ಲ. ಅವರ ಹೇಳಿಕೆಯನ್ನು ಆರೋಪ ಎಂದು ಪರಿಗಣಿಸಿದರೂ ಅದು ಎಫ್‌ಐಆರ್‌ಗೆ ಒಳಪಡುವಂತಹ ಸೌಹಾರ್ದ ಕದಡುವ ಅಥವಾ ಕೆಡುಕನ್ನು ಪ್ರಚೋದಿಸುವ ರೀತಿ ಇಲ್ಲ. ಅವರ ಬಂಧನ ಕಾನೂನು ಬಾಹಿರ. ಪೊಲೀಸರು ಅವರಿಗೆ ಮೊದಲು ವಿವರಣೆ ಕೋರಿ ನೋಟಿಸ್ ನೀಡಬೇಕಿತ್ತು. ಸೂಕ್ತ ಕಾರಣವಿದ್ದರೆ ಮಾತ್ರ ಬಂಧಿಸಬಹುದು ಎಂದು ರಾಣೆ ಪರ ಹಿರಿಯ ವಕೀಲ ರಾಜೇಂದ್ರ ಶಿರೋಡ್ಕರ್ ವಾದಿಸಿದ್ದರು.

Comments are closed.