ಢಾಕಾ: ತಮ್ಮ ಎರಡನೇ ದಿನದ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆಯೇ ಸತ್ಕಿರ ಜಿಲ್ಲೆಯ ಈಶ್ವರಿಪುರದಲ್ಲಿರುವ ಜೆಶೊರೇಶ್ವರಿ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಮೂಲಕ ವಿದೇಶಕ್ಕೆ ಹೋಗಿ ಭಾರತೀಯ ಸಂಸ್ಕೃತಿಯನ್ನು ಮೆರೆದಿರುವ ಪ್ರಧಾನಿ ಮೋದಿಯವರ ಫೋಟೋ, ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Feeling blessed after praying at the Jeshoreshwari Kali Temple. pic.twitter.com/8CzSSXt9PS
— Narendra Modi (@narendramodi) March 27, 2021
ಪೂಜೆ ಸಲ್ಲಿಸಿದ ಪ್ರಧಾನಿ ಕಾಳಿ ದೇವತೆಯ ಮೂರ್ತಿಗೆ ಮುಕುಟ ಧರಿಸಿದರು. ಹೊರಗೆ ಚಿನ್ನದ ಕವಚವಿರುವ ಬೆಳ್ಳಿ ಮುಕುಟ ಇದಾಗಿದ್ದು ಭಾರತದ ಸಾಂಪ್ರದಾಯಿಕ ಕಲಾವಿದರು ಇದನ್ನು ತಯಾರಿಸಲು ಮೂರು ವಾರ ತೆಗೆದುಕೊಂಡಿದ್ದರು.
ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಕಾಳಿ ಮಾತೆಯ ಮುಂದೆ ಪ್ರಾರ್ಥನೆ ಸಲ್ಲಿಸುವ ಅವಕಾಶ ಇಂದು ನನಗೆ ಸಿಕ್ಕಿತು. ಇಡೀ ಮನುಸಂಕುಲವನ್ನು ಕೋವಿಡ್-19 ಸಂಕಷ್ಟದಿಂದ ಪಾರುಮಾಡುವಂತೆ ದೇವಿ ಮುಂದೆ ಪ್ರಾರ್ಥನೆ ಮಾಡಿಕೊಂಡೆನು ಎಂದರು.
ಇಲ್ಲಿ ಕಾಳಿ ಮಾತೆಯ ಮೇಳ ನಡೆಯುವಾಗ ಅಸಂಖ್ಯಾತ ಸಂಖ್ಯೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಂದ ಜನರು ಬರುತ್ತಾರೆ. ಹೀಗೆ ಸಹಸ್ರಾರು ಜನರು ಬರುವಾಗ ಕಾಳಿ ಮಾತೆಯ ಪೂಜೆ ಮಾಡಲು ಕುಳಿತುಕೊಳ್ಳಲು, ವ್ಯವಸ್ಥೆಗೆ ಸಮುದಾಯ ಸಭಾಭವನ ನಿರ್ಮಿಸುವ ಅಗತ್ಯವಿದೆ ಎಂದು ಮನಗಂಡಿದ್ದೇನೆ ಎಂದು ಪ್ರಧಾನಿ ಹೇಳಿದರು.
ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೂ ಈ ಸಮುದಾಯ ಭವನ ಉಪಯುಕ್ತವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇದು ಚಂಡಮಾರುತದಂತಹ ವಿಪತ್ತುಗಳ ಸಮಯದಲ್ಲಿ ಎಲ್ಲರಿಗೂ ಆಶ್ರಯವಾಗಿ ಕಾರ್ಯನಿರ್ವಹಿಸಬೇಕು. ಭಾರತ ಸರ್ಕಾರ ನಿರ್ಮಾಣ ಕಾರ್ಯಗಳನ್ನು ಮಾಡುತ್ತದೆ. ಇದಕ್ಕಾಗಿ ಶುಭ ಹಾರೈಸಿದ ಬಾಂಗ್ಲಾದೇಶ ಸರ್ಕಾರಕ್ಕೆ ಅಭಿನಂದನೆಗಳು ಎಂದು ಪ್ರಧಾನಿ ಹೇಳಿದರು.
Comments are closed.