ರಾಷ್ಟ್ರೀಯ

ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಯಶವಂತ್‌ ಸಿನ್ಹಾ ಟಿಎಂಸಿ ಸೇರ್ಪಡೆ

Pinterest LinkedIn Tumblr

ನವದೆಹಲಿ: ಹಲವು ರಾಜಕೀಯ ಮೇಲಾಟಗಳಿಗೆ ಪಶ್ಚಿಮಬಂಗಾಳ ಚುನಾವಣಾ ಕಣ ಸಾಕ್ಷಿಯಾಗಿದ್ದು, ಚುನಾವಣಾ ರಂಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಶತಾಯಗತಾಯ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಿ, ತಾನು ಅಧಿಕಾರಕ್ಕೆ ಬರಲು ಬಿಜೆಪಿ ಹರಸಾಹಸ ಪಡುತ್ತಿದ್ದರೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಬಿಜೆಪಿಯನ್ನು ರಾಜ್ಯದೊಳಗೆ ಬಿಟ್ಟುಕೊಳ್ಳದಿರಲು ಹಲವು ಕಸರತ್ತು ನಡೆಸುತ್ತಿದ್ದಾರೆ. ಏತನ್ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಬಿಜೆಪಿ ತೊರೆದು ಟಿಎಂಸಿ ಪಕ್ಷ ಸೇರ್ಪಡೆಯಾಗಿದ್ದಾರೆ. ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ ದಿನಗಳು ಬಾಕಿ ಇರುವಂತೆ ಯಶವಂತ ಸಿನ್ಹಾ ಅವರು ಟಿಎಂಸಿ ಸೇರಿರುವುದು ಭಾರಿ ಕುತೂಹಲ ಮೂಡಿಸಿದೆ.

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಸಿ) ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶವಂತ ಸಿನ್ಹಾ ಅವರು, ಇಂದು ದೇಶ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಪ್ರಜಾಪ್ರಭುತ್ವದ ಅಂಗಸಂಸ್ಥೆಗಳ ಬಲದಲ್ಲಿದೆ. ಆದರೆ, ಇಂದು ನ್ಯಾಯಾಂಗ ಸೇರಿದಂತೆ ಎಲ್ಲ ಅಂಗಗಳು ದುರ್ಬಲಗೊಂಡಿವೆ ಎಂದು ಯಶವಂತ ಸಿನ್ಹಾ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಅಟಲ್​ ಜಿ ಅವರ ಅವಧಿಯಲ್ಲಿ ಬಿಜೆಪಿ ಒಮ್ಮತದಲ್ಲಿ ನಂಬಿಕೆ ಇರಿಸಿತ್ತು. ಆದರೆ, ಇಂದಿನ ಸರ್ಕಾರದಲ್ಲಿ ಪುಡಿ ಮಾಡುವುದು ಮತ್ತು ಜಯಿಸುವುದರ ಮೇಲೆ ನಂಬಿಕೆ ಇರಿಸಲಾಗಿದೆ. ಅಕಾಲಿ, ಬಿಜೆಡಿ ಸಹ ಇಂದು ಬಿಜೆಪಿ ತೊರೆದಿವೆ. ಇಂದು ಯಾರು ಬಿಜೆಪಿ ಜೊತೆಗೆ ನಿಂತುಕೊಳ್ಳಲಿದ್ದಾರೆ? ಎಂದು ಯಶವಂತ ಸಿನ್ಹಾ ಅವರು ಪ್ರಶ್ನೆ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬುಧವಾರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಸುತ್ತ ಪೊಲೀಸ್​ ಬಂದೋಬಸ್ತ್​ ಇಲ್ಲದ ಸಮಯದಲ್ಲಿ ನಾಲ್ಕು ಅಥವಾ ಐದು ಜನರಿಂದ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿತ್ತು. ಈ ಹಲ್ಲೆಯಿಂದ ಅವರ ಕಾಲಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ಮತ್ತೆ ಕೋಲ್ಕತ್ತಾಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸರ್ಕಾರಿ ವೈದ್ಯರು ಅವರ ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ತೀವ್ರತರವಾದ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದರು. ಇದು ಯೋಚಿತ ದಾಳಿ ಎಂದು ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಘಟಕ “ರಾಜಕೀಯಕ್ಕಾಗಿ ದಾಳಿಯ ಬಗ್ಗೆ ಮಮತಾ ಬ್ಯಾನರ್ಜಿ ಸುಳ್ಳು ಹರಡುತ್ತಿದ್ದಾರೆ. ಹಾಗಾಗಿ ಚುನಾವಣಾ ಆಯೋಗಕ್ಕೆ ಈ ಕುರಿತು ಪಶ್ಚಿಮ ಬಂಗಾಳ ಬಿಜೆಪಿ ದೂರು ನೀಡಲಿದೆ” ಎಂದು ತಿಳಿಸಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆಸ್ಪತ್ರೆಯಿಂದ ವ್ಹೀಲ್​ ಚೇರ್​ ಮೇಲೆ ಕುಳಿತು ಬ್ಯಾನರ್ಜಿ ಅವರು ಹೊರಬಂದರು.

Comments are closed.