ರಾಷ್ಟ್ರೀಯ

ಮನ್ ಕೀ ಬಾತ್’ನಲ್ಲಿ ಜಲ ಸಂರಕ್ಷಣೆ ಅಭಿಯಾನಕ್ಕೆ ಕರೆ ನೀಡಿದ ಮೋದಿ

Pinterest LinkedIn Tumblr

ನವದೆಹಲಿ: ಜಲ ಸಂರಕ್ಷಣೆಯಲ್ಲಿ ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಸಾರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಲ್ಲಾ ಜಲ ಸಂಪನ್ಮೂಲ ಘಟಕಗಳನ್ನು ಸ್ವಚ್ಛಗೊಳಿಸಿ ಮುಂದಿನ ಮುಂಗಾರು ಋತುವಿಗೆ ಮುನ್ನ ಮಳೆ ನೀರು ಸಂರಕ್ಷಣೆಗೆ ತಯಾರಿ ನಡೆಸಲು 100 ದಿನಗಳ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನದ ಮಾತು ಸರಣಿಯಲ್ಲಿ ಮಾತನಾಡಿದ ಅವರು, ಮಾನವ ಜನಾಂಗದ ಅಭಿವೃದ್ಧಿಗೆ ನೀರು ಅತ್ಯಂತ ಮುಖ್ಯವಾಗಿದೆ.ಜಲ ಸಂರಕ್ಷಣೆಯಲ್ಲಿ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಅರಿತು ಅರ್ಥಮಾಡಿಕೊಳ್ಳಬೇಕು ಎಂದರು.

ಬೇಸಿಗೆ ಕಾಲ ಬರುತ್ತಿದೆ. ಈ ಸಮಯದಲ್ಲಿ ನೀರಿನ ಸಂರಕ್ಷಣೆ ಮಹತ್ವವನ್ನು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಜನತೆಗೆ ಸಾರಿದ್ದಾರೆ. ಮಾಘ ಮಾಸದಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ. ಮಾರ್ಚ್ 22 ವಿಶ್ವ ಜಲ ದಿನ, ನೀರಿನ ಸಂರಕ್ಷಣೆ ಬಗ್ಗೆ ನಮ್ಮ ಜವಬ್ದಾರಿಗಳನ್ನು ಅರಿತುಕೊಳ್ಳಬೇಕು. ಇನ್ನು ಕೆಲವೇ ದಿನಗಳಲ್ಲಿ ಜಲಶಕ್ತಿ ಸಚಿವಾಲಯ ಮಳೆ ನೀರನ್ನು ಹಿಡಿದುಕೊಳ್ಳೋಣ ಅಭಿಯಾನವನ್ನು ಆರಂಭಿಸಲಿದೆ. ಮಳೆ ನೀರು ಬೀಳುವಲ್ಲಿ, ಯಾವಾಗ ಸುರಿಯುತ್ತದೋ ಆಗ ಹಿಡಿದಿಟ್ಟುಕೊಳ್ಳಿ ಎಂಬುದು ಅಭಿಯಾನದ ಘೋಷವಾಕ್ಯವಾಗಿದೆ ಎಂದರು.

ಇತ್ತೀಚಿನ ಅಂಕಿಅಂಶ ಪ್ರಕಾರ, ದೇಶದ ಪ್ರಮುಖ ಕಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 112 ಪಕ್ಷಿಗಳ ಪ್ರಬೇಧಗಳು ಸಿಕ್ಕಿವೆ. ಇಷ್ಟೊಂದು ಪ್ರಬೇಧದ ಹಕ್ಕಿಗಳು ಸಿಗಲು ಕಾರಣ ನೀರಿನ ಸಂರಕ್ಷಣೆ ಮತ್ತು ಪರಿಸರ, ಹಕ್ಕಿಗಳ ಉದ್ಯಾನವನದಲ್ಲಿ ಮಾನವನ ಸಂಘರ್ಷ ಕಡಿಮೆಯಾಗಿರುವುದು ಎಂದರು.

ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ. ಖ್ಯಾತ ವಿಜ್ಞಾನಿ ಡಾ ಸಿ ವಿ ರಾಮನ್ ಕಂಡುಹಿಡಿದ ರಾಮನ್ ಎಫೆಕ್ಟ್ ಗೆ ಮೀಸಲಿಟ್ಟ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದಿನ ಯುವಜನತೆ ಭಾರತದ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಓದಿ ಅಧ್ಯಯನ ಮಾಡಿ ಭಾರತದ ವಿಜ್ಞಾನದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಆತ್ಮನಿರ್ಭರ ಭಾರತಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ ಅನನ್ಯವಾದುದು. ಪ್ರಯೋಗಾಲಯವನ್ನು ಭೂಮಿಗೆ ತರುವ ‘ಲ್ಯಾಬ್ ಟು ಲ್ಯಾಂಡ್’ ಮಂತ್ರದೊಂದಿಗೆ ವಿಜ್ಞಾನವನ್ನು ಮುನ್ನಡೆಸಬೇಕು. ಲಡಾಕ್‌ನ ಉರ್ಗೆನ್ ಫುಂಟ್‌ಸಾಗ್ 20 ವಿಭಿನ್ನ ಬೆಳೆಗಳನ್ನು ಸಾವಯವವಾಗಿ ಆವರ್ತಕ ಮಾದರಿಯಲ್ಲಿ ಬೆಳೆಯಲು ನಾವೀನ್ಯತೆ ತಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವಿಜ್ಞಾನದ ಕೊಡುಗೆಯ ಉದಾಹರಣೆ ಕೊಟ್ಟರು.

ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು: ಶೀಘ್ರದಲ್ಲಿಯೇ ವಿದ್ಯಾರ್ಥಿಗಳು ವರ್ಷದ ಅಂತಿಮ ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷೆಯನ್ನು ಯೋಧರಂತೆ ಎದುರಿಸಬೇಕೆ ಹೊರತು ಪರೀಕ್ಷೆಯೆಂದು ಚಿಂತೆಪಡುವುದು, ಭಯಪಡುವುದು ಮಾಡಬಾರದು. ಉತ್ತಮ ರೀತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸಿ. ಸಾಕಷ್ಟು ನಿದ್ರಿಸಿ, ಸಮಯ ನಿರ್ವಹಣೆ ಚೆನ್ನಾಗಿ ಮಾಡಿ, ವಿರಾಮ ವೇಳೆಯಲ್ಲಿ ಆಟವಾಡಿ ಎಂದು ಸಲಹೆ ನೀಡಿದರು.

ಮಾರ್ಚ್ ತಿಂಗಳ ಪರೀಕ್ಷಾ ಪೆ ಚರ್ಚಾ ವಿಷಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಸಲಹೆಗಳನ್ನು ನೀಡುವಂತೆ ಇದೇ ಸಂದರ್ಭದಲ್ಲಿ ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯದೇ ಇರುವುದಕ್ಕೆ ತಮಗೆ ಪಶ್ಚಾತ್ತಾಪವಿದೆ ಎಂದು ಕೂಡ ಹೇಳಿದರು. ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ಈ ಸುದೀರ್ಘ ವರ್ಷಗಳಲ್ಲಿ ನಾನು ಏನನ್ನಾದರೂ ಕಳೆದುಕೊಂಡಿದ್ದೀರಾ ಎಂದು ನನ್ನನ್ನು ಕೇಳಿದರೆ, ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗಲಿಲ್ಲ ಎಂಬ ವಿಷಾದವಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

Comments are closed.