ರಾಷ್ಟ್ರೀಯ

ಕಾಂಗ್ರೆಸ್ ಸೋಲಿಗೆ ಸೋನಿಯಾ, ಮನಮೋಹನ್ ಸಿಂಗ್ ಕಾರಣ: ಪ್ರಣಬ್ ಮುಖರ್ಜಿ

Pinterest LinkedIn Tumblr


ನವದೆಹಲಿ: ಪ್ರಣಬ್ ಮುಖರ್ಜಿ ಅವರ “ದಿ ಪ್ರೆಸಿಡೆನ್ಸಿಯಲ್ ಇಯರ್ಸ್-2012-17” ಆತ್ಮಚರಿತ್ರೆಯಲ್ಲಿ ಕಾಂಗ್ರೆಸ್ ಸೋಲಿಗೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಕಾರಣವೆಂದು ಹೇಳಲಾಗಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಗಸ್ಟ್ ನಲ್ಲಿ ನಿಧನರಾಗಿದ್ದರು. ಅವರು ತಮ್ಮ ದೀರ್ಘಾವಧಿಯ ರಾಜಕೀಯ ಜೀವನ ಸೇರಿದಂತೆ ಕಾಂಗ್ರೆಸ್ ಪಕ್ಷದ ದುಸ್ಥಿತಿಯ ಕುರಿತು ಹಲವು ಒಳಸುಳಿವುಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾರಣ ಎಂದು ಆರೋಪಿಸಿದ್ದಾರೆ.

ಒಂದು ವೇಳೆ 2004ರಲ್ಲಿ ನಾನೇನಾದರೂ ಪ್ರಧಾನಿಯಾಗಿದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನ್ನನುಭವಿಸುತ್ತಿರಲಿಲ್ಲ ಎಂದು ಕೆಲವು ಕಾಂಗ್ರೆಸ್ ಮುಖಂಡರು ನಂಬಿದ್ದರು.

ಆದರೆ ಇದಕ್ಕೆ ನನ್ನ ಸಹಮತ ಇಲ್ಲವಾಗಿತ್ತಾದರೂ, ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದ ಮೇಲೆ ಪಕ್ಷದ ನಾಯಕತ್ವ ನಷ್ಟವಾಗಿದೆ ಎಂದು ಭಾವಿಸುತ್ತೇನೆ. ಪಕ್ಷದ ರಾಜಕೀಯ ವ್ಯವಹಾರಗಳನ್ನು ನಿಭಾಯಿಸುವಲ್ಲಿ ಸೋನಿಯಾ ಗಾಂಧಿ ಅಸಮರ್ಥರಾಗಿದ್ದರು. ಡಾ.ಮನಮೋಹನ್ ಸಿಂಗ್ ಅವರು ದೀರ್ಘಾವಧಿವರೆಗೆ ಸದನದಿಂದ ದೂರ ಉಳಿದಿದ್ದರು. ಇದರ ಪರಿಣಾಮ ಸಂಸದರೊಂದಿಗಿನ ವೈಯಕ್ತಿಕ ಸಂಪರ್ಕ ಕಡಿತಗೊಂಡಿತು ಎಂದು ಪ್ರಣಬ್ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ.

ರೂಪಾ ಪಬ್ಲಿಷರ್ಸ್ಸ್ ಪ್ರಣಬ್ ದಾದಾ ಅವರ “ದ ಪ್ರೆಸಿಡೆನ್ಶಿಯಲ್ ಇಯರ್ಸ್” ಆತ್ಮಚರಿತ್ರೆಯನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದ್ದು, ಕಾಂಗ್ರೆಸ್ ಸರ್ಕಾರವಿದ್ದಾಗ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ದಿನದಿಂದ ಹಿಡಿದು 2012ರಲ್ಲಿ ರಾಷ್ಟ್ರಪತಿಯಾಗುವವರೆಗೆ ಕಾಂಗ್ರೆಸ್ ಪಕ್ಷದ ಗೆಲುವು, ಸೋಲು, ದುಸ್ಥಿತಿ ಕುರಿತು ನಡೆಸಿರುವ ವಿಶ್ಲೇಷಣೆ ಪುಸ್ತಕದಲ್ಲಿರುವುದಾಗಿ ವರದಿ ತಿಳಿಸಿದೆ.

ಡಾ.ಪ್ರಣಬ್ ಮುಖರ್ಜಿ ಅವರು ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಸೇರಿದಂತೆ ಇಬ್ಬರು ಪ್ರಧಾನಿಗಳ ಜತೆಗೂ ಕಾರ್ಯನಿರ್ವಹಿಸಿದ್ದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮೈತ್ರಿಕೂಟವನ್ನು ರಕ್ಷಿಸಿಕೊಳ್ಳುವುದರಲ್ಲಿಯೇ ತಲ್ಲೀನರಾಗಿದ್ದರು. ಇದರಿಂದ ಸಮರ್ಥ ಆಡಳಿತ ನೀಡುವಲ್ಲಿ ಸಿಂಗ್ ವಿಫಲರಾದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಥಮ ಅವಧಿಯಲ್ಲಿ ನಿರಂಕುಶ ಆಡಳಿತ ನಡೆಸಿದ್ದರು.

ಅವರ ನಿರಂಕುಶ ಆಡಳಿತದಿಂದ ಸರ್ಕಾರ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಕಡಿಮೆ ಸಂಬಂಧ ಹೊಂದಿದ್ದರಿಂದ ತಿಕ್ಕಾಟಕ್ಕೆ ಕಾರಣವಾಗಿತ್ತು. ಆದರೆ ಅವರ ಎರಡನೇ ಅವಧಿ ಉತ್ತಮ ಸಂಬಂಧದ ಮೂಲಕ ಆಡಳಿತ ಚುಕ್ಕಾಣಿ ಮುನ್ನಡೆಸಲಿದ್ದಾರೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು ಎಂದು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

Comments are closed.