ಲಖನೌ: ಮದರಸಾದೊಳಗೆ ಮುಸ್ಲಿಂ ಬಾಲಕನೊಬ್ಬನನ್ನು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ನಗರದಲ್ಲಿ ನಡೆದಿದೆ.
ನಗರದ ಜಹಾನಾಬಾದ್ ಪ್ರದೇಶದ ಅಲ್ಜಾಮಿಯಾ ತುಲ್ ಮದರಸಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೆರೆಡು ತಿಂಗಳ ಹಿಂದೆ ಪೋಷಕರೊಬ್ಬರು ತಮ್ಮ 12 ವರ್ಷದ ಮಗನನ್ನು ಈ ಮದರಸಾಕ್ಕೆ ಸೇರಿಸಿದ್ದರು. ನನಗೆ ಇಲ್ಲಿರಲು ಇಷ್ಟವಿಲ್ಲವೆಂದು ಮಗ ಎಷ್ಟೇ ಬೇಡಿಕೊಂಡರೂ ಕೇಳದ ತಂದೆ ಆತನನ್ನು ಅಲ್ಲೇ ಬಿಟ್ಟು ತೆರಳಿದ್ದರು. ಮದರಸಾಕ್ಕೆ ದಾಖಲಾಗಿ ಕೆಲವೇ ದಿನದಲ್ಲಿ ಅಲ್ಲಿಂದ ಓಡಿ ಹೋಗುವ ಪ್ರಯತ್ನವನ್ನು ಬಾಲಕ ಮಾಡಿದ್ದಾನೆ. ಅದೇ ಕಾರಣಕ್ಕಾಗಿ ಬಾಲಕನನ್ನು ಮೆಟಲ್ ಚೈನ್ನಿಂದ ಕಟ್ಟಿ ಹಾಕಲಾಗಿದೆ. ತಪ್ಪು ಮಾಡಿದ್ದಕ್ಕಾಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಯಿಂದ ಭಯಗೊಂಡಿದ್ದ ಬಾಲಕ ನವೆಂಬರ್ 25ರಂದು ಮತ್ತೊಮ್ಮೆ ತಪ್ಪಿಸಿಕೊಂಡು ಮದರಸಾದಿಂದ ಹೊರಗೆ ಬಂದಿದ್ದಾನೆ. ದಾರಿಯಲ್ಲಿ ಓಡಿ ಹೊರಟಿದ್ದ ಬಾಲಕನನ್ನು ಅಲ್ಲಿನ ಸಿಬ್ಬಂದಿಗಳು ಕಷ್ಟ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಬಾಲಕ ಸಹಾಯಕ್ಕಾಗಿ ಕೂಗಿದ್ದರಿಂದಾಗಿ ಜನರು ಸೇರಿದ್ದು, ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದೆ.
ನವೆಂಬರ್ 27ರಂದು ಮಕ್ಕಳ ಕಲ್ಯಾಣ ಸಮಿತಿಯು ಬಾಲಕನ ಹೇಳಿಕೆಯನ್ನು ದಾಖಲಿಸಿದೆ. ತನ್ನಂತೆ ಒಟ್ಟು ಏಳು ಬಾಲಕರ ಮೇಲೆ ಈ ರೀತಿ ಹಿಂಸೆ ಮಾಡಲಾಗುತ್ತಿದೆ ಎಂದು ಬಾಲಕ ಹೇಳಿದ್ದಾನೆ. ಆದರೆ ಇದರ ಮಧ್ಯೆ ತನಿಖೆ ಆರಂಭಿಸಿದ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್ ಖಾಲಿದ್, ಬಾಲಕ ಸುಳ್ಳು ಹೇಳಿದ್ದಾನೆ ಎಂದು ದಾಖಲಿಸಿದ್ದು, ಮದರಸಾದ ಮೇಲಿದ್ದ ಆರೋಪವನ್ನು ತೆಗೆದುಹಾಕಿದ್ದಾರೆ.
ಘಟನೆಯ ಸೂಕ್ಷ್ಮತೆಯನ್ನು ಅರಿತ ಜಿಲ್ಲಾಧಿಕಾರಿ ಪುಲ್ಕಿತ್ ಶ್ರೀವಾಸ್ತವ್, ಮೊಹಮ್ಮದ್ ಖಾಲಿದ್ ಅವರ ವರದಿಯನ್ನು ಪ್ರಶ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಏಕೆ ವಿಳಂಬವಾಗಿದೆ ಎಂದು ವಿವರಿಸಲು ಸಿಡಬ್ಲ್ಯೂಸಿಯನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮದರಸಾದ ಮೇಲ್ವಿಚಾರಕರು, ಬಾಲಕನ ತಂದೆ ಮತ್ತು ಓರ್ವ ಶಿಕ್ಷಕನ ಮೇಲೆ ದೂರು ದಾಖಲಿಸಲಾಗಿದೆ.
Comments are closed.