ಲಖನೌ: ಲಾಕ್ಡೌನ್ನಿಂದಾಗಿ ಕೆಲಸ ಕಳೆದುಕೊಂಡ ತಂದೆಯೊಬ್ಬ ತನ್ನ ಪುತ್ರನನ್ನೇ ಹತ್ಯೆಮಾಡಿ, ಆತನ ಶವದೊಂದಿಗೇ ಮಲಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಲಂಕಾರ್ ಶ್ರೀವಾಸ್ತವ್ (43) ಮತ್ತು ಸಾರಿಕಾದ್ದು ಸುಖ ಸಂಸಾರವಾಗಿತ್ತು. ತುಲಿಕಾ (16), ಗೀತಿಕಾ (10) ಮತ್ತು ಋಷಾಂಕ್ (7) ಹೆಸರಿನ ಮೂರು ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ಅವರು ನಡೆಸುತ್ತಿದ್ದರು. ಆದರೆ ಲಾಕ್ಡೌನ್ ಆರಂಭವಾದ ಮೇಲೆ ಅವರ ಜೀವನಕ್ಕೆ ಸಂಕಷ್ಟಗಳು ಬಂದೊದಗಿದೆ. ಅಲಂಕಾರ್ ಕೆಲಸ ಕಳೆದುಕೊಂಡಿದ್ದಾನೆ. ಅತ್ಯಂತ ಮುದ್ದಿನಿಂದ ಸಾಕಿದ್ದ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದೆ ಎಂದು ಸಾಕಷ್ಟು ನೊಂದುಕೊಂಡಿದ್ದಾನೆ.
ಇದೇ ನೋವಿನಲ್ಲಿದ್ದ ಅಲಂಕಾರ್ ಶುಕ್ರವಾರ ರಾತ್ರಿ ಮಗ ಮಲಗಿದ್ದ ಕೋಣೆಗೆ ತೆರಳಿದ್ದಾನೆ. ಮುದ್ದಿನ ಮಗನ ಕೊಲೆ ಮಾಡಿ, ಆ ಶವದೊಂದಿಗೇ ಪೂರ್ತಿ ರಾತ್ರಿ ಮಲಗಿದ್ದಾನೆ. ಅದಾದ ನಂತರ ಮುಂಜಾನೆ 5 ಗಂಟೆ ಹೊತ್ತಿಗೆ ತನ್ನ ಕೋಣೆಗೆ ಬಂದ ಆತ, ‘ನನ್ನ ಮಗನನ್ನು ನಾನು ಕೊಲೆ ಮಾಡಿಬಿಟ್ಟೆ. ಇನ್ನು ಯಾರೂ ಅವರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ’ ಎಂದು ಪತ್ನಿಯ ಬಳಿ ಹೇಳಿದ್ದಾನೆ. ಗಾಬರಿಗೊಂಡ ಪತ್ನಿ ಮಗನ ಕೋಣೆಗೆ ಹೋಗಿ ನೋಡಿದಾಗ ಮಗನ ಶವ ಕಂಡುಬಂದಿದೆ.
ತಕ್ಷಣ ಈ ವಿಚಾರವನ್ನು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಲಾಗಿದೆ. ಸಾರಿಕಾ ಪತಿಯ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದಾಳೆ. ಕೊಲೆ ಆರೋಪದಡಿಯಲ್ಲಿ ಅಲಂಕಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
Comments are closed.