ರಾಷ್ಟ್ರೀಯ

ನಿವಾರ್‌ ಚಂಡಮಾರುತ: 5 ಮಂದಿ ಬಲಿ, ಅಪಾರ ಪ್ರಮಾಣದ ಬೆಳೆ ಹಾನಿ

Pinterest LinkedIn Tumblr


ಚೆನ್ನೈ: ನಿವಾರ್‌ ಚಂಡಮಾರುತವು ಗುರುವಾರ ಇಡೀ ದಿನ ತಮಿಳುನಾಡು, ಪುದುಚೆರಿ, ಆಂಧ್ರಪ್ರದೇಶಗಳಲ್ಲಿ ಭಾರಿ ಮಳೆ ಸುರಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ವಿವಿಧ ಕಡೆಗಳಲ್ಲಿ ಸಂಭವಿಸಿದ ಮಳೆ ಸಂಬಂಧಿತ ದುರಂತಗಳಲ್ಲಿ ಐವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ಒಟ್ಟು 19 ಜಿಲ್ಲೆಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ನಾಗಪಟ್ಟಿಣಂ, ತಿರುವರೂರು, ತಾಂಜಾವೂರು, ಪುದುಕೊಟ್ಟೈನಲ್ಲಿ ಚಂಡ­ಮಾರುತದ ಪರಿಣಾಮ ಮಳೆ ತೀವ್ರವಾಗಿ ರಸ್ತೆಗಳಲ್ಲಿ ಕನಿಷ್ಠ ಎರಡು ಅಡಿಗಳಷ್ಟು ನೀರು ನಿಂತು ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ಈ ಪ್ರದೇಶಗಳಲ್ಲಿನ ನದಿಗಳೂ ತುಂಬಿ ಹರಿಯುತ್ತಿವೆ. ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ ಅವರು ಕಡಲೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ರಕ್ಷಣಾ ಕಾರ್ಯಾಚರಣೆ ಮತ್ತು ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಅಲ್ಲಿನ ಸಿಎಂ ನಾರಾಯಣಸ್ವಾಮಿ ಅವರು ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದು, ನಿಷೇಧಾಜ್ಞೆ ತೆರವುಗೊಳಿಸಲು ಆದೇಶ ನೀಡಿದ್ದಾರೆ.

ಬುಧವಾರ ಸಂಜೆಯಿಂದ ಬಂದ್‌ ಮಾಡಲಾಗಿದ್ದ ರೈಲುಗಳು ಮತ್ತು ವಿಮಾನಗಳ ಸಂಚಾರವನ್ನು ಮಳೆಯ ಪ್ರಮಾಣ ತಗ್ಗಿದ್ದರಿಂದ ಗುರುವಾರ ಮಧ್ಯಾಹ್ನ ಪುನಾರಂಭಿಸಲಾಯಿತು. ಗುರುವಾರ ಮಧ್ಯರಾತ್ರಿ ವೇಳೆಗೆ ನಿವಾರ್‌ ದುರ್ಬಲವಾಗಲಿದ್ದು ವಿಶಾಖಪಟ್ಟಣಂ ಕಡಲ ಮೂಲಕ ಮುಂದೆ ಸಾಗಲಿದೆ.

ನೆಲ್ಲೂರು ಜಿಲ್ಲೆ ಸೇರಿದಂತೆ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ನಿವಾರ್‌ ಪರಿಣಾಮ ಭಾರಿ ಗಾಳಿ ಸಹಿತ ಮಳೆಯಾದ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಜಗನ್‌ಮೋಹನ್‌ ರೆಡ್ಡಿ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಸಂತ್ರಸ್ತರಿಗೆ ಶೀಘ್ರ ನೆರವು ನೀಡುವಂತೆ ಆದೇಶಿಸಿದ್ದಾರೆ. ಚಿತ್ತೂರು, ಕಡಪ, ಕೃಷ್ಣಾ, ಪೂರ್ವ ಗೋದಾವರಿ ಜಿಲ್ಲೆಗಳಲ್ಲಿನ 177 ಪ್ರದೇಶಗಳಲ್ಲಿ 6-30 ಸೆ.ಮೀ ವರೆಗೆ ಭಾರಿ ಮಳೆಯಾಗಿದೆ.

Comments are closed.