ಇಸ್ಲಮಾಬಾದ್: ಕಳೆದ ವರ್ಷ 2019ರ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕ್ ಬಿಡುಗಡೆ ಮಾಡಿದ್ದು ಭಾರತ ದಾಳಿ ನಡೆಸಬಹುದು ಎಂಬ ಹೆದರಿಕೆಯಿಂದ ! ಇದನ್ನು ಖುದ್ದು ಹೇಳಿದ್ದು ಪಾಕಿಸ್ತಾನದ ಸಂಸದ.
ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಆ ಘಟನೆಯನ್ನು ನೆನಪಿಸಿಕೊಂಡಿರುವ ಪಾಕಿಸ್ತಾನದ ಸಂಸದ ಆ ವೇಳೆ ಭಾರತ ದಾಳಿ ನಡೆಸಬಹುದು ಎಂದು ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ಹೇಳಿದ್ದಾರೆ. ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಕ್ಕೆ ಪಡೆದ ಬಳಿಕ ಸಂಸದೀಯ ನಾಯಕರೊಂದಿಗೆ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಪಾಕ್ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ ‘ನಾವು ಅಭಿನಂದನ್ ಅವರನ್ನು ವಶಕ್ಕೆ ಪಡೆದಿರುವುದರಿಂದ ಭಾರತ ನಮ್ಮ ದೇಶದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ’ ಎಂದು ಹೇಳಿದ್ದರು. ಅಷ್ಟರಲ್ಲಾಗಲೇ ಮಿಲಿಟರಿ ಚೀಫ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು. ಅದಾದ ಬಳಿಕ ಸಭೆಯಲ್ಲಿ ಚರ್ಚೆ ಮಾಡಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಪಾಕ್ ಸಂಸದ ಅಯಾಸ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪಾಕಿಸ್ತಾನದ ಸಂಸದ ಅಯಾಸ್ ಸಾಧಿಕ್ ಮಾತನಾಡಿರುವ ಈ ವಿಡಿಯೋವನ್ನು ನಿವೃತ್ತ ಮೇಜರ್ ಗೌರವ್ ಆರ್ಯ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾವು ಒಂದುವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ನಮ್ಮ ದೇಶದ ಮೇಲೆ ಇಂದು ರಾತ್ರಿ 9 ಗಂಟೆಗೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪಾಕ್ ವಿದೇಶಾಂಗ ಸಚಿವ ಖುರೇಷಿ ಹೇಳಿದ್ದರು ಎಂದು ಕೂಡ ವಿಡಿಯೋದಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಮಿಲಿಟರಿ ಚೀಫ್ ಬಾಜ್ವಾ, ವಿದೇಶಾಂಗ ಸಚಿವ ಖುರೇಷಿ ಸೇರಿದಂತೆ ಸಂಸದೀಯ ನಾಯಕರು, ಅಧಿಕಾರಿಗಳ ಜೊತೆಗೆ ಅಂದು ಸಭೆ ನಡೆಸಲಾಗಿತ್ತು. ನನಗಿನ್ನೂ ನೆನಪಿದೆ, ಆ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಇಮ್ರಾನ್ ಖಾನ್ ಒಪ್ಪಿರಲಿಲ್ಲ. ಆಗ ಸಭೆಗೆ ಮಿಲಿಟರಿ ಚೀಫ್ ಬಾಜ್ವಾ ಬಂದರು. ಆಗ ಅವರ ಕಾಲುಗಳು ನಡುಗುತ್ತಿದ್ದವು, ಮಾತನಾಡಲು ತೊದಲುತ್ತಿದ್ದರು. ಆಗ ವಿದೇಶಾಂಗ ಸಚಿವ ಷಾ ಮೊಹಮದ್ ಖುರೇಷಿ, ನಾವು ಈಗ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವುದೇ ಉತ್ತಮ ಎಂದು ಹೇಳಿದ್ದರು ಎಂದು ಸಂಸದ ಅಯಾಜ್ ಸಾಧಿಕ್ ನೆನಪಿಸಿಕೊಂಡಿದ್ದಾರೆ.
ಭಾರತದ ವಾಯುಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಬೆನ್ನಟ್ಟಿ ಹೋಗಿದ್ದ ಅಭಿನಂದನ್ ಅವರ ಮಿಗ್ 21 ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 2019ರ ಫೆಬ್ರವರಿಯಲ್ಲಿ ಹೊಡೆದುರುಳಿಸಲಾಗಿತ್ತು. ಆಗ ಪಿಓಕೆ ಜಾಗದೊಳಗೆ ಪ್ರವೇಶಿಸಿದ್ದ ಅಭಿನಂದನ್ ಅವರ ಯುದ್ಧವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ನಂತರ ಅಭಿನಂದನ್ ಅವರನ್ನು ಪಾಕಿಸ್ತಾನ ತನ್ನ ವಶಕ್ಕೆ ಪಡೆದಿತ್ತು. ಬಳಿಕ ಉಭಯ ದೇಶಗಳ ನಡುವಿನ ಹಲವು ಸುತ್ತಿನ ಮಾತುಕತೆಯ ನಂತರ ಅಟ್ಟಾರಿ ವಾಘಾ ಗಡಿಯ ಮೂಲಕ ಪಾಕಿಸ್ತಾನ ಅಭಿನಂದನ್ ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಮಾರ್ಚ್ 1ರಂದು ಭಾರತಕ್ಕೆ ಹಸ್ತಾಂರವಾಗಿದ್ದ ಅಭಿನಂದನ್ ವರ್ಧಮಾನ್ ಅವರಿಗೆ ಸ್ವಾತಂತ್ರ್ಯೋತ್ಸವದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೀರಚಕ್ರ ಪ್ರಶಸ್ತಿ ನೀಡಿದ್ದರು.
Comments are closed.