ರಾಷ್ಟ್ರೀಯ

ಕೊರೊನಾ ಸೋಂಕಿತ ಯುವಕನಿಗೆ ಪಾರ್ಶ್ವವಾಯು: ವೈದ್ಯರಲ್ಲಿ ಮೂಡಿದ ಸಂಶಯ

Pinterest LinkedIn Tumblr


‘ಹೊಸದಿಲ್ಲಿ: ಕೊರೊನಾ ಸೋಂಕಿಗೆ ತುತ್ತಾಗುವ ರೋಗಿಗಳಿಗೆ ಪಾರ್ಶ್ವವಾಯು ಆಗಬಹುದಾ? ದಿಲ್ಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯ ವೈದ್ಯರಲ್ಲಿ ಇಂತಹದೊಂದು ಪ್ರಶ್ನೆ ಉದ್ಭವಿಸಿದೆ.

ಇಲ್ಲಿ ಕೊರೋನಾ ಸೋಂಕಿನಿಂದ ದಾಖಲಾಗಿರುವ 19 ವರ್ಷದ ರೋಗಿಗೆ ಕೈಕಾಲುಗಳನ್ನು ಮೇಲೆತ್ತಲಾಗದ ಪರಿಸ್ಥಿತಿ ಎದುರಾಗಿದೆ. 19 ವರ್ಷದ ಈ ಯುವಕನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದ್ರೆ, ಕಳೆದ ಆಗಸ್ಟ್‌ನಲ್ಲಿ ಆತ ಮಹಡಿ ಮೆಟ್ಟಿಲುಗಳನ್ನು ಹತ್ತುವಾಗ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ಆತನ ಎರಡೂ ಕೈ ಹಾಗೂ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿರೋದು ಅರಿವಿಗೆ ಬಂತು.

ವೈದ್ಯಕೀಯ ಲೋಕದಲ್ಲಿ ಈ ಪರಿಸ್ಥಿತಿಗೆ ಗುಲೈನ್ ಬೆರ್ ಸಿಂಡ್ರೋಮ್ (ಜಿಬಿಎಸ್) ಎಂದು ಕರೆಯುತ್ತಾರೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ. ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ಆತನ ಬಾಹ್ಯ ನರಮಂಡಲಕ್ಕೇ ದಾಳಿ ಇಡುವ ಸನ್ನಿವೇಶ ಇದು. ಈ ವೇಳೆ ಯುವಕನನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸಿದಾಗ ಆತನಿಗೆ ಕೊರೊನಾ ಸೋಂಕು ಕೂಡಾ ಇರೋದು ಪತ್ತೆಯಾಯ್ತು.

ಆತನ ದೇಹದ ಸೆರಬ್ರೋಸ್ಪೈನಲ್ ದ್ರವದಲ್ಲಿ ಕೊರೊನಾ ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಅಂಶಗಳು ಪತ್ತೆಯಾದವು. ಈ ಮೂಲಕ ಆತನಿಗೆ ಕೊರೊನಾ ಇರೋದು ದೃಢಪಟ್ಟಿತ್ತು. ಆತನ ದೇಹಕ್ಕೆ ಕೊರೊನಾ ರೋಗಾಣು ಪ್ರವೇಶಿಸಿದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಡಲು ಆತನ ದೇಹದ ರೋಗ ನಿರೋಧಕ ಶಕ್ತಿ ಯತ್ನಿಸಿದೆ. ಈ ವೇಳೆ ಅದು ಆತನ ದೇಹದ ನರಮಂಡಲಕ್ಕೇ ದಾಳಿ ಇಟ್ಟಿರಬಹುದು ಎಂದು ಗಂಗಾರಾಮ್ ಆಸ್ಪತ್ರೆಯ ವೈದ್ಯ ಡಾ. ಅತುಲ್ ಗೋಗಿಯಾ ಅಭಿಪ್ರಾಯಪಟ್ಟಿದ್ದಾರೆ.

ಯುವಕ ಆಸ್ಪತ್ರೆಗೆ ದಾಖಲಾದ ವೇಳೆ ಆತನಿಗೆ ಜ್ವರದ ಯಾವುದೇ ಲಕ್ಷಣ ಇರಲಿಲ್ಲ. ಆದ್ರೆ, ಆತ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಎಂದು ಹೇಳಿರುವ ವೈದ್ಯರು, ಕೆಲವು ವಾರಗಳ ಕಾಲ ಆತನನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು ಎಂದು ಹೇಳಿದ್ದಾರೆ. ಸರಿಸುಮಾರು ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ಬಾಲಕ ಇದೀಗ ಚೇತರಿಕೆ ಕಂಡಿದ್ದಾನೆ. ಇದೀಗ ಆತ ತನ್ನ ಕಾಲು, ಕೈಗಳನ್ನು ಅಲುಗಾಡಿಸುವಷ್ಟು ಚೇತರಿಕೆ ಆಗಿದೆ. ಆದ್ರೆ, ಆತ ಮೊದಲಿನಂತಾಗಲು ಇನ್ನೆಷ್ಟು ಕಾಲ ಬೇಕಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ಧಾರೆ.

Comments are closed.