ರಾಷ್ಟ್ರೀಯ

ಪತಿಗಾಗಿ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರದಿಂದ ಹೊರಗುಳಿದ ಸೈನಾ ನೆಹ್ವಾಲ್..!

Pinterest LinkedIn Tumblr


ಹೈದರಾಬಾದ್​: ಲಂಡನ್​ ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್​ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರದಿಂದ ಹೊರಗುಳಿದಿದ್ದಾರೆ. ಆಗಸ್ಟ್​ 7 ರಿಂದಲೇ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್​) ಹಾಗೂ ಭಾರತೀಯ ಬ್ಯಾಡ್ಮಿಂಟನ್​ ಸಂಸ್ಥೆ (ಬಿಎಐ) ಜಂಟಿಯಾಗಿ ಟೋಕಿಯೊ ಒಲಿಂಪಿಕ್ಸ್​ ಸಿದ್ಧತೆಗಾಗಿ ಗೋಪಿಚಂದ್​ ಅಕಾಡೆಮಿಯಲ್ಲಿ ಶಿಬಿರ ಆರಂಭಿಸಲಾಗಿದೆ. ಒಲಿಂಪಿಕ್ಸ್​ನಲ್ಲಿ ಪದಕ ಭರವಸೆ ಹೊಂದಿರುವ ಕೇವಲ 8 ಮಂದಿಯನ್ನಷ್ಟೇ ಶಿಬಿರಕ್ಕೆ ಮಾಡಲಾಗಿದ್ದು, ಸೈನಾ ಪತಿ 2014ರ ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ಪದಕ ವಿಜೇತ ಪಿ.ಕಶ್ಯಪ್​ ಅವರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗಿಲ್ಲ. ಇದರಿಂದ ಸಾಯ್​-ಬಿಎಐ ನಿರ್ಧಾರದ ವಿರುದ್ಧ ಆಕ್ರೋಶಗೊಂಡಿರುವ ಸೈನಾ ಶಿಬಿರಕ್ಕೆ ಹಾಜರಾಗದೆ, ಪತಿ ಕಶ್ಯಪ್​ ಜತೆಗೆ ಪ್ರತ್ಯೇಕವಾಗಿ ಅಭ್ಯಾಸ ಆರಂಭಿಸಿದ್ದಾರೆ.

ಪತಿಯನ್ನು ಶಿಬಿರಕ್ಕೆ ಆಯ್ಕೆ ಮಾಡಬೇಕೆಂದು ಸೈನಾ ಮಾಡಿದ್ದ ಮನವಿಗೆ ಸೂಕ್ತವಾಗಿ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಅಭ್ಯಾಸ ಆರಂಭಿಸಿದ್ದಾರೆ. ಮತ್ತೊಂದೆಡೆ, ಕಶ್ಯಪ್​ ಕೂಡ ಸಾಯ್​ ಹಾಗೂ ಬಿಎಐಗೆ ಪತ್ರ ಬರೆದು ರಾಷ್ಟ್ರೀಯ ಶಿಬಿರದಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ. ಜತೆಗೆ ಹೊರಗೆ ಅಭ್ಯಾಸ ಮಾಡಿದರೂ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಶಿಬಿರಕ್ಕೆ ಆಯ್ಕೆಯಾಗಿರುವ 8 ಮಂದಿ ಪೈಕಿ ವಿಶ್ವ ಚಾಂಪಿಯನ್​ ಪಿವಿ ಸಿಂಧು, ಡಬಲ್ಸ್​ ತಜ್ಞೆ ಸಿಕ್ಕಿ ರೆಡ್ಡಿ, ಮಾಜಿ ವಿಶ್ವ ನಂ.1 ಕೆ.ಶ್ರೀಕಾಂತ್​ ಹಾಗೂ ಸಾಯಿ ಪ್ರಣಿತ್​ ಮಾತ್ರ ಶಿಬಿರಕ್ಕೆ ಹಾಜರಾಗುತ್ತಿದ್ದಾರೆ. ಉಳಿದಂತೆ, ಕನ್ನಡತಿ ಅಶ್ವಿನಿ ಪೊನ್ನಪ್ಪ ಬೆಂಗಳೂರಿನಲ್ಲೇ ಅಭ್ಯಾಸ ಮಾಡುತ್ತಿದ್ದರೆ, ಪುರುಷರ ಡಬಲ್ಸ್​ ಜೋಡಿ ಚಿರಾಗ್​ ಶೆಟ್ಟಿ ಹಾಗೂ ಸಾತ್ವಿಕ್​ ಸಾಯ್​ರಾಜ್​ ಜೋಡಿ ಇನ್ನಷ್ಟೇ ಶಿಬಿರ ಕೂಡಿಕೊಳ್ಳಬೇಕಿದೆ. ಚಿರಾಗ್​ ಮುಂಬೈನಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಸಾತ್ವಿಕ್​ ಆಂಧ್ರಪ್ರದೇಶದ ಅಮಲಾಪುರಂನಲ್ಲಿದ್ದಾರೆ.

Comments are closed.