ರಾಷ್ಟ್ರೀಯ

ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿದ್ದ ಕೇರಳದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಕೋ-ಪೈಲಟ್ ಅಖಿಲೇಶ್ ಶರ್ಮ !

Pinterest LinkedIn Tumblr

ಮಥುರಾ: ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ ನಂತರ ಗೋವಿಂದ ನಗರದ ತುಳಸೀರಾಮ ಶರ್ಮ ಕುಟುಂಬದಲ್ಲಿ ಸೂತಕದ ಛಾಯೆ.

ತುಳಸೀರಾಮ ಶರ್ಮ ಅವರ ಪುತ್ರ 32 ವರ್ಷದ ಅಖಿಲೇಶ್ ಶರ್ಮ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಸಹ ಪೈಲಟ್ ಆಗಿದ್ದರು, ಮೊನ್ನೆ ರಾತ್ರಿ ದುರಂತದಲ್ಲಿ ದಾರುಣ ಅಂತ್ಯ ಕಂಡಿದ್ದರು.

ನಿನ್ನೆ ಬೆಳಗ್ಗೆ ಅವರಿಗೆ ಸಂಬಂಧಿಕರೊಬ್ಬರಿಂದ ಕರೆ ಬಂದು ತಮ್ಮ ಮಗ ಮೃತಪಟ್ಟಿದ್ದಾರೆ ಎಂದು ತಿಳಿಸಿದಾಗ ಕುಟುಂಬಕ್ಕೆ ಆದ ಆಘಾತ ಅಷ್ಟಿಷ್ಟಲ್ಲ, ದಿಕ್ಕೇ ತೋಚದಂತಾಯಿತು. ವಿಮಾನ ಅಪಘಾತದಲ್ಲಿ ಮೃತಪಟ್ಟ 18 ಮಂದಿಯಲ್ಲಿ ಅಖಿಲೇಶ್ ಶರ್ಮ ಕೂಡ ಒಬ್ಬರು.

190 ಜನರನ್ನು ಹೊತ್ತು ದುಬೈಯಿಂದ ಹೊರಟು ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಝಿಕ್ಕೋಡ್ ವಿಮಾನ ನಿಲ್ದಾಣದ ರನ್ ವೇಯಲ್ಲಿ 35 ಅಡಿ ಆಳದ ಕಂದಕಕ್ಕೆ ಬಿದ್ದು ಎರಡು ಹೋಳುಗಳಾಗಿ ಹೋಯಿತು. ದುರ್ಘಟನೆಯಲ್ಲಿ ಮುಖ್ಯ ಪೈಲಟ್ ಕ್ಯಾಪ್ಟನ್ ವಸಂತ್ ಸಾಠೆ, ಸಹ ಪೈಲಟ್ ಅಖಿಲೇಶ್ ಶರ್ಮ ಮತ್ತು ಇತರ 16 ಮಂದಿ ಮೃತಪಟ್ಟಿದ್ದಾರೆ.

ದುರ್ಘಟನೆಯನ್ನು ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಅದರ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ ಅಖಿಲೇಶ್ ಶರ್ಮ ಅವರ ಪತ್ನಿ ಮೇಘ ಇನ್ನು ಕೆಲವೇ ವಾರಗಳಲ್ಲಿ ಪುಟ್ಟ ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರಿಗೆ ವಿಷಯ ತಿಳಿಸಿದರೆ ಎಲ್ಲಿ ಆಘಾತವಾಗಬಹುದೋ ಎಂಬ ಭಯದಿಂದ ಕುಟುಂಬದವರು ಅವರಿಗೆ ಪತಿಯ ಸಾವಿನ ವಿಷಯವನ್ನೇ ಹೇಳಲಿಲ್ಲವಂತೆ.

ಅಖಿಲೇಶ್ ಶರ್ಮರ ಇಡೀ ಕುಟುಂಬ ಇಷ್ಟು ದಿನಗಳಿಂದ ಮಗುವಿನ ಸ್ವಾಗತದ ಖುಷಿಯಲ್ಲಿತ್ತು. ಇಂತಹ ಘೋರ ಘಟನೆ ನಡೆಯಬಹುದು ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ ಎಂದು ಅಖಿಲೇಶ್ ಅವರ ಸೋದರ ಮಾವ ಕಮಲ್ ಶರ್ಮ ಹೇಳುತ್ತಾರೆ.

Comments are closed.