ರಾಷ್ಟ್ರೀಯ

ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ ಕೇರಳ ಆರೋಗ್ಯ ಸಚಿವೆ ಭಾಷಣ

Pinterest LinkedIn Tumblr


ತಿರುವನಂತಪುರಂ (ಕೇರಳ): ಕೊರೊನಾ ವೈರಸ್‌ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡುತ್ತಿರುವ ದೇವರ ನಾಡು ಕೇರಳಕ್ಕೆ ಮತ್ತೊಂದು ಗರಿ ಸಂದಿದ್ದು, ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಅವರನ್ನು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯ ವರ್ಚುವಲ್‌ ಸಮಾವೇಶದಲ್ಲಿ ಪ್ರಮುಖ ಪ್ಯಾನೆಲ್‌ ಭಾಷಣಕಾರರನ್ನಾಗಿ ವಿಶ್ವ ಆರೋಗ್ಯ ಸಂಸ್ಥೆ ಆಹ್ವಾನಿಸಿತ್ತು.

ವಿಶ್ವಸಂಸ್ಥೆಯ ಈ ಕಾರ್ಯಕ್ರಮಕ್ಕೆ ಆಹ್ವಾನಗೊಂಡಿರುವ ಏಕೈಕ ಭಾರತೀಯರು ಇವರಾಗಿದ್ದಾರೆ. ಕೊರೊನಾ ವೈರಸ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಸಾರ್ವಜನಿಕ ಸೇವಕರನ್ನು ಗೌರವಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ವರ್ಚುವಲ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಂಗಳವಾರ ಸಂಜೆ 6.30ಕ್ಕೆ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜಾನಿ ಮುಹಮ್ಮದ್ ಬಂಡೆ, ಯುಎನ್‌ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳ ಕಾರ್ಯದರ್ಶಿ ಲ್ಯೂ ಝೇನ್‌ಮಿನ್‌ ಹಾಗೂ ಕೊರಿಯಾದ ಆಂತರಿಕ ಭದ್ರತೆ ಸಚಿವ ಚಿನ್‌ ಯಂಗ್‌ ಪ್ರಮುಖವಾಗಿ ಭಾಗವಹಿಸಿದ್ದರು.

ಇನ್ನು, ಎಚ್.ಇ.ಇಥಿಯೋಪಿಯಾದ ಅಧ್ಯಕ್ಷ ಎಂ.ಎಸ್.ಸಾಹ್ಲೆ-ವರ್ಕ್ ಜೆವ್ಡೆ, ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ.ಟೆಡ್ರೊಸ್‌ ಅದಾನಂ ಗೇಬ್ರಿಯೆಸಸ್‌ ವರ್ಚುವಲ್‌ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು. ಇನ್ನು, ಕೊರೊನಾ ಪರಿಸ್ಥಿತಿಯಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ನಿರ್ವಹಿಸುತ್ತಿರುವ ಗಂಭೀರ ಪಾತ್ರದ ಬಗ್ಗೆ ಪ್ಯಾನೆಲ್‌ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ಯಾನೆಲ್‌ ಚರ್ಚೆಯಲ್ಲಿ ಕೊರಿಯಾದ ಆಂತರಿಕ ಭದ್ರತೆಯ ಉಪಮಂತ್ರಿ ಡಾ.ಇನ್‌ ಜಾಯ್‌ ಲೀ, ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌, ನ್ಯೂಯಾರ್ಕ್‌ನ ಗವರ್ನರ್‌ ಆಂಡ್ರೂ ಕ್ಯುಮೋ, ಅಂತರಾಷ್ಟ್ರೀಯ ನರ್ಸ್‌ಗಳ ಮಂಡಳಿಯ ಅಧ್ಯಕ್ಷೆ ಅನ್ನೆಟ್ಟೆ ಕೆನಡಿ, ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಸಂಪನ್ಮೂಲ ವಿಭಾಗದ ನಿರ್ದೇಶಕ ಜಿಮ್‌ ಕ್ಯಾಂಪ್‌ಬೆಲ್‌ ಮತ್ತು ಅಂತರಾಷ್ಟ್ರೀಯ ಸಾರ್ವಜನಿಕ ಸೇವೆಗಳ ಅಧ್ಯಕ್ಷೆ ರೋಸಾ ಪಾವನೇಲಿ ಭಾಗವಹಿಸಿದ್ದರು.

ಕೊರೊನಾ ವೈರಸ್‌ ಕಾರಣದಿಂದ ಬಹಳಷ್ಟು ಜನ ಮನೆಯಲ್ಲಿಯೇ ಇರುವಾಗ, ಆರೋಗ್ಯ, ನೈರ್ಮಲ್ಯ, ಸಾಮಾಜಿಕ ಕಲ್ಯಾಣ, ಶಿಕ್ಷಣ, ಅಂಚೆ ವಿತರಣೆ, ಸಾರಿಗೆ, ಕಾನೂನು ಜಾರಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳನ್ನು ಸಾರ್ವಜನಿಕ ಸೇವಕರು ತಮ್ಮ ಜೀವ ಪಣಕ್ಕಿಟ್ಟು ಮುಂದುವರೆಸಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Comments are closed.