ರಾಷ್ಟ್ರೀಯ

ಇಂದಿನ ಸೂರ್ಯಗ್ರಹಣದಿಂದ ಕೊರೋನಾ ಸಂಹಾರ? ವಿಜ್ಞಾನ ಏನ್ ಹೇಳುತ್ತದೆ?

Pinterest LinkedIn Tumblr


ಜೂನ್ 21, ಭಾನುವಾರದಂದು ಕಂಕಣ ಸೂರ್ಯಗ್ರಹಣ ಆಗುತ್ತಿದೆ. ಇಂಗ್ಲೀಷ್​ನಲ್ಲಿ ಇದಕ್ಕೆ Anullar Solar Eclipse ಅಥವಾ Ring of Fire ಎನ್ನುತ್ತಾರೆ. ಗ್ರಹಣ ಉಚ್ಛ್ರಾಯ ಸ್ಥಿತಿಗೆ ಬಂದಾಗ ಸೂರ್ಯ ಒಂದು ಉಂಗುರದಂತೆ ಕಂಗೊಳಿಸುತ್ತಾನೆ. ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಬಂದು ಈ ಗ್ರಹಣವಾಗುತ್ತದೆ. ಚಂದ್ರ ಸರಿಯಾಗಿ ಮಧ್ಯ ಬಂದಾಗ ಸೂರ್ಯನ ಹೊರಭಾಗ ಮಾತ್ರ ಗೋಚರವಾಗಿ ಅದು ಉಂಗುರದಂತೆ ಕಾಣುತ್ತದೆ. ಫಳಫಳ ಹೊಳೆಯುತ್ತದೆ. ಅದಕ್ಕೆ ಅದನ್ನ ಆನುಲಾರ್ ಸೋಲಾರ್ ಎಕ್ಲಿಪ್ಸ್ ಅಥವಾ ರಿಂಗ್ ಆಫ್ ಫಯರ್ ಎನ್ನುತ್ತಾರೆ.

ಭಾನುವಾರ ಆಗುತ್ತಿರುವುದು ಈ ವರ್ಷದ ಮೂರನೇ ಗ್ರಹಣ. ಮೊದಲ ಸೂರ್ಯಗ್ರಹಣ. ಈ ಮುಂಚೆ ಎರಡು ಚಂದ್ರಗ್ರಹಣಗಳಾಗುತ್ತಿವೆ. ಇಂಥದ್ದೊಂದು ಕಂಕಣ ಸೂರ್ಯಗ್ರಹಣ 1911ರ ನಂತರ ಮೊದಲ ಬಾರಿಗೆ ಆಗುತ್ತಿದೆ. ಅಂದರೆ ಇದು ಶತಮಾನಕ್ಕೆ ಒಮ್ಮೆ ಆಗುವ ವಿಶೇಷ ಗ್ರಹಣ ಇದು.

ಕೊರೋನಾ ನಾಶವಾಗುತ್ತಾ?
ಈ ಅವಧಿಯಲ್ಲಿ ಕಂಕಣ ಸೂರ್ಯಗ್ರಹಣದಿಂದ ಕೊರೋನಾ ವೈರಸ್ ನಾಶ ಆಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಗೂಗಲ್ ಸರ್ಚ್​ನಲ್ಲೂ ಜನರು ಈ ಬಗ್ಗೆಯೇ ಹೆಚ್ಚು ಅನುಮಾನದಿಂದ ಶೋಧ ನಡೆಸುತ್ತಿರುವುದು ಕಂಡುಬಂದಿದೆ.

ಈ ಅನುಮಾನಗಳು ಹುಟ್ಟಲೂ ಕಾರಣವಿದೆ. ಡಿಸೆಂಬರ್ 26ರಂದು ಆದ ಸೂರ್ಯಗ್ರಹಣಕ್ಕೂ ಕೊರೋನಾ ವೈರಸ್ ಹರಡುವಿಕೆಗೂ ಸಂಬಂಧ ಇದೆ ಎಂದು ಚೆನ್ನೈನ ವಿಜ್ಞಾನಿ ಡಾ. ಕೆಎಲ್ ಸುಂದರ್ ಕೃಷ್ಣ ಅವರು ಪ್ರತಿಪಾದಿಸಿದ್ದರು. ಡಿಸೆಂಬರ್ 26ರ ಸೂರ್ಯಗ್ರಹಣದ ಬಳಿಕ ನಮ್ಮ ಸೌರ ವ್ಯವಸ್ಥೆಯಲ್ಲಿ ಗ್ರಹಗಳ ಪಥ ಪಲ್ಲಟ ಆಗಿದೆ. ಹಾಗೆಯೇ ಆ ಸೂರ್ಯಗ್ರಹಣದ ನಂತರ ಬಂದ ಮೊದಲ ನ್ಯೂಟ್ರಾನ್​ಗಳಿಂದ ಭೂಮಿಯ ಉಚ್ಚ ವಾತಾವರಣದಲ್ಲಿ ಜೈವಿಕ-ಪರಮಾಣು ಬೆರಕೆಯ ಕ್ರಿಯೆ ಆಗಿದೆ. ಅದರಿಂದ ಕೊರೋನಾ ವೈರಸ್ ಉದ್ಭವಿಸಿತು ಎಂದು ಡಾ. ಸುಂದರ್ ಕೃಷ್ಣ ವಾದ ಮುಂದಿಟ್ಟಿದ್ದರು. ಇದೇ ವಾದದ ಪರಿದಿಯಲ್ಲಿ ನಾಳೆ ನಡೆಯಲಿರುವ ಕಂಕಣ ಸೂರ್ಯಗ್ರಹಣವು ಕೊರೋನಾ ನಾಶಕ ಎಂದು ಬಿಂಬಿಸಲಾಗುತ್ತಿದೆ.

ವಿಜ್ಞಾನ ಏನು ಹೇಳುತ್ತೆ?ಡಾ. ಕೆಎಲ್ ಸುಂದರ್ ಕೃಷ್ಣ ಅವರದ್ದು ವೈಜ್ಞಾನಿಕ ಸಿದ್ಧಾಂತವಾಗಿಲ್ಲ. ಸೂರ್ಯಗ್ರಹಣದಿಂದ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಕೊರೋನಾ ಎಂದರೆ ಸೂರ್ಯನ ಮೇಲ್ಮೈ. ಆದರೆ, ಈ ವೈರಸ್​ಗೂ ಸೂರ್ಯನಿಗೂ ಹೆಸರು ಬಿಟ್ಟರೆ ಯಾವ ಸಂಬಂಧವೂ ಇಲ್ಲ. 1986ರಲ್ಲಿ ಹೊಸ ವೈರಸ್ ಪತ್ತೆಯಾಗಿತ್ತು. ಅದನ್ನು ಮೈಕ್ರೋಸ್ಕೋಪ್​ನಲ್ಲಿ ನೋಡಿದಾಗ ನೋಡಲು ಸೂರ್ಯನ ಕೊರೋನಾದಂತೆಯೇ ಆಕಾರ ಹೊಂದಿತ್ತು. ಸೂರ್ಯನ ಮೇಲ್ಮೈನಲ್ಲಿ ಅನಿಲಗಳಿದ್ದು ಅದು ಒಂದು ರೀತಿಯಲ್ಲಿ ವಿಶೇಷ ಮೇಲ್ಮೈ ಆಕಾರ ಬಿಂಬಿಸುತ್ತದೆ. 1986ರಲ್ಲಿ ಪತ್ತೆಯಾದ ಆ ಹೊಸ ವೈರಸ್​ಗೆ ವಿಜ್ಞಾನಿಗಳು ಕೊರೋನಾವೈರಸ್ ಎಂದು ಹೆಸರಿಟ್ಟರು. ಇದು ಬಿಟ್ಟರೆ ಸೂರ್ಯನಿಗೂ ಈ ವೈರಸ್​ಗೂ ಸಂಬಂಧವೇ ಇಲ್ಲ.

ಸೂರ್ಯನ ಬಿಸಿಲಿಗೆ ಈ ವೈರಸ್ ಸತ್ತು ಹೋಗುತ್ತದೆ ಎಂಬ ವಾದಕ್ಕೂ ಯಾವುದೇ ಆಧಾರ ಇಲ್ಲ. ಸೂರ್ಯನ ಕೊರೋನಾಗೆ ಈ ವೈರಸ್​ಗಳನ್ನ ತಾಕಿಸಿದರೆ ಸುಟ್ಟುಹೋಗಬಹುದು ಅಷ್ಟೇ. ಸರಿಯಾಗಿ ಶುಭ್ರವಾಗಿಟ್ಟುಕೊಳ್ಳುವ ಕಾರ್ಯಗಳಿಂದಷ್ಟೇ ಈ ವೈರಸನ್ನು ನಾವು ದೂರ ಮಾಡಲು ಸಾಧ್ಯ. ನಮ್ಮ ದೇಹವೆಂಬ ದೇಗುಲದೊಳಗೆ ಪ್ರತಿರೋಧಕ ಶಕ್ತಿ ಇದ್ದರೆ ವೈರಸ್ ಅನ್ನ ನಿಷ್ಕ್ರಿಯಗೊಳಿಸಬಹುದು. ಅದು ಬಿಟ್ಟರೆ ನಮಗೆ ಅನ್ಯ ಮಾರ್ಗವಿಲ್ಲ. ಔಷಧ ಮತ್ತು ಲಸಿಕೆ ತಯಾರಾಗುವವರೆಗೂ ಹೀಗೇ ಹೋರಾಡುತ್ತಲೇ ಇರಬೇಕು ಎಂದು ವಿಜ್ಞಾನಿಗಳು ಮತ್ತು ವೈದ್ಯರು ಹೇಳುತ್ತಾರೆ.

Comments are closed.