ನವ ದೆಹಲಿ (ಜೂನ್ 19); ಮೂವರು ಉಗ್ರರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಹಾಗೂ ಅವರಿಗೆ ಭಾರತದ ಒಳಗೆ ಪ್ರವೇಶಿಸಲು ಸಹಕರಿಸಿದ್ದ ಆರೋಪದ ಮೇಲೆ ಬಂಧಿಸಲಾಗಿದ್ದ ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೇವಿಂದರ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ಇಂದು ಜಾಮೀನು ನೀಡಿ ಆದೇಶಿಸಿದೆ.
ಈ ವರ್ಷದ ಆರಂಭದಲ್ಲಿ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಇಬ್ಬರು ಹಿಜ್ಬ್-ಉಲ್-ಮುಜಾಹಿದ್ದೀನ್ ಭಯೋತ್ಪಾದಕರನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರದ ಡಿಎಸ್ಪಿ ದೇವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಆದರೆ, ಈತ ಬಂಧನಕ್ಕೊಳಗಾಗಿ 90ದಿನಗಳು ಕಳೆದರೂ ಸಹ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈವರೆಗೆ ಚಾರ್ಜ್ಶೀಟ್ ಸಲ್ಲಿಸದ ಕಾರಣ ನ್ಯಾಯಾಲಯ ಜಾಮೀನು ನೀಡಿದೆ ಎಂದು ಆರೋಪಿಯ ವಕೀಲ ಎಂ.ಎಸ್. ಖಾನ್ ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ
ಸಂಸತ್ ಮೇಲಿನ ದಾಳಿಗಾಗಿ ಮರಣದಂಡನೆಗೆ ಗುರಿಯಾದ ಅಫ್ಜಲ್ ಗುರು, 2004ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲ ಸುಶೀಲ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಬಗ್ಗೆ ಉಲ್ಲೇಖವಿದೆ. ದಾಳಿಕೋರರಿಗೆ ಕಾರು ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸಿಂಗ್ ತನ್ನನ್ನು ಕೇಳಿಕೊಂಡದ್ದಾಗಿ ಈ ಪತ್ರದಲ್ಲಿ ಅಫ್ಜಲ್ ಗುರು ಆರೋಪಿಸಿದ್ದರು. ನಂತರ ತಾನು ಅಫ್ಜಲ್ ಗುರುವಿಗೆ ಚಿತ್ರಹಿಂಸೆ ನೀಡಿರುವುದಾಗಿ ದೇವಿಂದರ್ ಸಿಂಗ್ ಸಹ ಒಪ್ಪಿಕೊಂಡಿದ್ದರು.
ಈಗ, 2020ರಲ್ಲಿ ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ದಾಳಿ ನಡೆಸಲು ಹೋಗುತ್ತಿದ್ದರು ಎನ್ನಲಾದ ಇಬ್ಬರು ಉಗ್ರಗಾಮಿಗಳ ಜೊತೆ ಸಿಂಗ್ ಬಂಧಿತರಾಗಿದ್ದರು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ, ಪುಲ್ವಾಮ ದಾಳಿಯಲ್ಲಿ 45ಕ್ಕೂ ಹೆಚ್ಚು ಭಾರತೀಯ ಸೈನಿಕರು ಸಾವನ್ನಪ್ಪಿದ ಘಟನೆಯ ಹಿಂದೆಯೂ ಸಹ ಇಂತಹದ್ದೇ ಷಡ್ಯಂತ್ರ ಇದೆ ಎಂದು ಅನುಮಾನ ವ್ಯಕ್ತವಾಗಿತ್ತು. ಇದೇ ನಿಟ್ಟಿನಲ್ಲಿ ತನಿಖೆ ಸಹ ಸಾಗಿತ್ತು.
Comments are closed.