ರಾಷ್ಟ್ರೀಯ

ಇಎಂಐ ಬಡ್ಡಿ ಮನ್ನಾ ಪ್ರಕರಣ: ಸರ್ಕಾರ ಕೈಚೆಲ್ಲುವಂತಿಲ್ಲ ಎಂದ ಸುಪ್ರೀಂ!

Pinterest LinkedIn Tumblr


ನವದೆಹಲಿ: ಇಎಂಐ ಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತು ಕೇಂದ್ರ ಸರಕಾರಗಳು ಮರುಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ಸಾಲದ ಕಂತು ಮುಂದೂಡಿಕೆ ಅವಧಿಯಲ್ಲಿ ಬಡ್ಡಿಯನ್ನು ಮನ್ನಾ ಮಾಡಬೇಕು ಎನ್ನುವ ಗ್ರಾಹಕರ ಬೇಡಿಕೆಯನ್ನು ಬ್ಯಾಂಕ್‌ಗಳು ವಿರೋಧಿಸಿದ್ದವು. ಈ ಕುರಿತಂತೆ ಸುಪ್ರೀಂ ಕೋರ್ಟ್‌ ಬುಧವಾರ ವಿಚಾರಣೆ ನಡೆಸಿತು.

ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಅಸಹಾಯಕತೆ ಪ್ರದರ್ಶಿಸುವಂತಿಲ್ಲ. ಇದು ಬ್ಯಾಂಕುಗಳು ಮತ್ತು ಗ್ರಾಹಕರ ನಡುವಿನ ವಿಚಾರ ಎಂದೂ ಹೇಳವಂತಿಲ್ಲ “ಎಂದು ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

“ಗ್ರಾಹಕರಿಗೆ ಯೋಜನೆಗಳ ಯೋಜನಗಳು ಲಭ್ಯವಾಗುವುದನ್ನು ಖಾತರಿಪಡಿಸಿಕೊಳ್ಳುವುದು ಕೇಂದ್ರದ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಆರ್.ಶಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆ ಮುಂದೂಡಿದೆ.

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಗೃಹ, ವಾಹನ ಸೇರಿದಂತೆ ಅವಧಿ ಸಾಲಗಳ ಇಎಂಐ ಮುಂದೂಡಲು ಆರ್‌ಬಿಐ ಅವಕಾಶ ನೀಡಿತ್ತು. ಆದರೆ, ಆ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು ಎನ್ನುವ ಒತ್ತಾಯಗಳಿದ್ದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ವಿವರಣೆ ನೀಡುವಂತೆ ಆರ್‌ಬಿಐ ಮತ್ತು ಹಣಕಾಸು ಸಚಿವಾಲಯಕ್ಕೆ ಸುಪ್ರೀಂ ಇತ್ತೀಚೆಗೆ ಸೂಚಿಸಿತ್ತು. ಏತನ್ಮಧ್ಯೆ, ”ಬಡ್ಡಿ ಮನ್ನಾ ಸಾಧ್ಯವಿಲ್ಲ. ಬಡ್ಡಿ ಮನ್ನಾ ಮಾಡಿದರೆ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರೂ. ಹೊರೆ ಬೀಳಲಿದೆ,” ಎಂದು ಆರ್‌ಬಿಐಗೆ ಬ್ಯಾಂಕ್‌ಗಳು ಹೇಳಿವೆ.

Comments are closed.