ರಾಷ್ಟ್ರೀಯ

ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಪ್ರೀತಿಸಿ ಓಡಿಹೋದ ಜೋಡಿ !

Pinterest LinkedIn Tumblr

ಭುವನೇಶ್ವರ್: ಮಹಾಮಾರಿ ಕೊರೊನಾ ವೈರಸ್ ಪ್ರಪಂಚದಾದ್ಯಂತ ಭಾರೀ ಕೋಲಾಹಲ ಸೃಷ್ಟಿ ಮಾಡಿದೆ. ಹಾಗೆಯೇ ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ.

ಈ ಜೋಡಿ ಕಳೆದ ಜನವರಿಯಲ್ಲಿ ತಮ್ಮ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಪುರಿ ಜಿಲ್ಲೆಯ ಸಗದ ಗ್ರಾಮದ ಸೌರಭ್ ದಾಸ್(19) ಭಾನುವಾರ ತನ್ನ ಪ್ರಿಯತಮೆ ಪಿಂಕ್ಯಾರಾಣಿ ದಾಸ್ ಳನ್ನು 14 ದಿನಗಳ ಕ್ವಾರಂಟೈನ್ ಮುಗಿಸಿ ಕೇಂದ್ರದಲ್ಲೇ ಮದುವೆಯಾಗಿದ್ದಾನೆ. ಸೌರಭ್ ತನ್ನ ಪ್ರಿಯತಮೆಯೊಂದಿಗೆ ಜನವರಿ ತಿಂಗಳಲ್ಲಿ ಓಡಿಹೋಗಿ ಅಹಮದಾಬಾದ್ ನಲ್ಲಿ ನೆಲೆಸಿದ್ದನು. ಆದರೆ ಯುವಕನ ಮೇಲೆ ಯುವತಿ ಕುಟುಂಬಸ್ಥರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ.

ಸೌರಭ್ ಅಹಮದಾಬಾದ್ ನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಕೊರೊನಾ ಹೆಮ್ಮಾರಿಯಿಂದ ಲಾಕ್ ಡೌನ್ ಆದ ಪರಿಣಾಮ ಕೆಲಸ ಇರಲಿಲ್ಲ. ಹೀಗಾಗಿ ಇಬ್ಬರು ಮತ್ತೆ ತಮ್ಮ ತಾಯ್ನಾಡಿಗೆ ಬರಲು ಕಷ್ಟಪಡುತ್ತಿದ್ದರು. ಹೇಗೋ ಕಷ್ಟಪಟ್ಟು ಕೊನೆಗೂ ಜೋಡಿ ತಮ್ಮ ಗ್ರಾಮಕ್ಕೆ ವಾಪಸ್ಸಾಗಿತ್ತು. ಈ ವೇಳೆ ಅವರನ್ನು ಕೂಡಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಮೇ 10 ರಂದು ಅಹಮದಾಬಾದ್ ನಿಂದ ವಾಪಸ್ಸಾಗಿದ್ದ ಜೋಡಿಯನ್ನು ಕ್ವಾರಂಟೈನ್ ಗೆ ಹಾಕಿ ತಪಾಸಣೆ ನಡೆಸಲಾಯಿತು. ಈ ವೇಳೆ ಇಬ್ಬರಲ್ಲೂ ಕೋವಿಡ್ 19 ಲಕ್ಷಣ ಕಂಡು ಬಂದರೂ ಗಂಟಲ ದ್ರವ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ. ಇತ್ತ ಯುವತಿ ಅದಾಗಲೇ ಗರ್ಭಿಣಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಅವರಿಬ್ಬರಿಗೂ ಮದುವೆ ಮಾಡಿಸಲು ನಿರ್ಧಾರ ಮಾಡಲಾಯಿತು. ಹಾಗೆಯೇ ಮೇ 24 ಅಂದರೆ ಅವರ ಕ್ವಾರಂಟೈನ್ ಅವಧಿ ಮುಗಿದ ತಕ್ಷಣವೇ ಸಗದ ಕ್ವಾರಂಟೈನ್ ಕೇಂದ್ರದಲ್ಲಿ ಮದುವೆ ಕಾರ್ಯಕ್ರಮ ನೆರವೇರಿಸಲಾಯಿತು ಎಂದು ಅಧಿಕಾರಿ ಮನೋಜ್ ಬೆಹೇರಾ ತಿಳಿಸಿದ್ದಾರೆ.

ಮದುವೆಯ ವೇಳೆ ಇಬ್ಬರ ಕುಟುಂಬಸ್ಥರಿಗೂ ಕ್ವಾರಂಟೈನ್ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಮುಖ್ಯಸ್ಥರಾಗಿದ್ದ ಇಬ್ಬರು ಶಿಕ್ಷಕಿಯರು ಹಾಗೂ ವರ ಮತ್ತು ವಧುವಿನ ಪೋಷಕರಷ್ಟೇ ಭಾಗಿಯಾಗಿದ್ದರು. ವಾರ್ಡ್ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಮದುವೆಯನ್ನು ಆಯೋಜನೆ ಮಾಡಿದ್ದಾರೆ.

ಓಡಿಶಾದಲ್ಲಿ ಬುಧವಾರದವರೆಗೆ 76 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, ಸೋಂಕಿತರ ಸಂಖ್ಯೆ 1,593ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.