ರಾಷ್ಟ್ರೀಯ

ಕೊರೋನಾ ನಿರ್ವಹಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಹೊಗಳಿದ ರಾಹುಲ್ ಗಾಂಧಿ

Pinterest LinkedIn Tumblr


ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕರೋನಾವೈರಸ್ (Coronavirus) ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಸಾಧನೆ ಮಾಡಿವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

ಸಾಮಾನ್ಯವಾಗಿ ರಾಜಕಾರಣಿಗಳು ತಮಗೆ ಯಾವುದೋ ಒಂದು ಪ್ರದೇಶ, ಸಮುದಾಯ ಸರಿ ಎನಿಸಿದರೂ ಬೇರೆಯವರು ಮುನಿಸಿಕೊಳ್ಳುತ್ತವೆ ಎನ್ನುವ ಕಾರಣಕ್ಕೆ ಮುಕ್ತವಾಗಿ ಮಾತನಾಡುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಪವಾದ. ಅವರು ಇತ್ತೀಚೆಗೆ ‘ಮೋದಿ ವಿರುದ್ಧ ನನಗೆ ಹಲವು ಭಿನ್ನಾಭಿಪ್ರಾಯಗಳಿವೆ, ಅವರ ವಿರುದ್ಧ ನನ್ನ ಹೋರಾಟ ನಿರಂತರವಾದುದು, ಆದರೆ ಇದು ಹೋರಾಟ ಮಾಡುವ ಸಮಯವಲ್ಲ. ಕಷ್ಟಕಾಲ’ ಎಂದಿದ್ದರು. ಮೋದಿ, ರಾಷ್ಟ್ರಪತಿ ಮತ್ತು ಪಿಎಂಓ‌ ಕಚೇರಿಯ ಟ್ವೀಟರ್ ಖಾತೆಗಳನ್ನು ಅಮೆರಿಕದ ಶ್ವೇತಭವನ ಅನ್ ಫಾಲೋ ಮಾಡಿದಾಗಲೂ ಭಾರತದ ಪರ, ಮೋದಿ ಪರ ಬ್ಯಾಟ್ ಬೀಸಿದ್ದರು.

ಈಗ ಕೊರೋನಾ ಕೋವಿಡ್-19 (Covid-19) ಸಂಕಷ್ಟವನ್ನು ದಕ್ಷಿಣ ಭಾರತ ಸಮರ್ಥವಾಗಿ ಎದುರಿಸುತ್ತಿದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಕಾರಣವನ್ನೂ ನೀಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಕೇಂದ್ರೀಕರಣ ಪದ್ದತಿ ಇದೆ. ದಕ್ಷಿಣ ಭಾರತದ ಜನರಿಗೆ ಇಂಥ ಸಂದಿಗ್ಧ ಸಂದರ್ಭದಲ್ಲಿ ತಾವು ಏನು ಮಾಡಬೇಕೆಂದು ಯೋಚಿಸುವ ಶಕ್ತಿ ಇದೆ ಎಂದು ಕೊಂಡಾಡಿದ್ದಾರೆ.

ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂದರ್ಶನ ನಡೆಸುವ ವಿಡಿಯೋ ಸರಣಿ ಆರಂಭಿಸಿರುವ ರಾಹುಲ್ ಗಾಂಧಿ, ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌವರ್ನರ್ ಡಾ. ರಘುರಾಮ್ ರಾಜನ್ ಅವರೊಂದಿಗೆ ಮಾತನಾಡುತ್ತಿದ್ದರು. ಕೊರೋನಾ ಮತ್ತು ಲಾಕ್ಡೌನ್ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂದು ರಘುರಾಮ್ ರಾಜನ್ ಜೊತೆ ಸಮಾಲೋಚನೆ ನಡೆಸುತ್ತಿದ್ದರು‌.‌

ಹಿಂದೆ ರಾಹುಲ್ ಗಾಂಧಿ ತಮ್ಮ ವಿಡಿಯೋ ಸರಣಿಯಲ್ಲಿ ‘ಕೇಂದ್ರ ಸರ್ಕಾರ ಕೊರೋನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ನಿರ್ವಹಿಸಬೇಕು’ ಎಂದು ಹೇಳಿದ್ದರು. ಇಂದು ಹೆಚ್ಚು ಕಡಿಮೆ ಇದೇ ಅರ್ಥ ಬರುವ ರೀತಿಯಲ್ಲಿ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಅವರ ರೀತಿಯಲ್ಲೇ ಬಡವರಿಗಾಗಿ 65,000 ಕೋಟಿ ರೂಪಾಯಿಗಳನ್ನು ನೀಡಿ ಎಂದು ಒತ್ತಾಯಿಸಿದ್ದಾರೆ.

Comments are closed.