ರಾಷ್ಟ್ರೀಯ

ಒಂದೇ ಹುಡುಗಿಯ ಹಿಂದೆಬಿದ್ದ ಇಬ್ಬರು ಶಿಕ್ಷಕರು; ಒಬ್ಬನನ್ನು ಕೊಂದ ಇನ್ನೊಬ್ಬ ಶಿಕ್ಷಕ ಆತ್ಮಹತ್ಯೆಗೆ ಶರಣು

Pinterest LinkedIn Tumblr

ಲಕ್ನೋ: ಒಂದೇ ಹುಡುಗಿಯ ಹಿಂದೆ ಇಬ್ಬರು ಶಿಕ್ಷಕರು ಬಿದ್ದು, ಇಬ್ಬರೂ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

ಸೂರಜ್ ಪಾಂಡೆ ಮತ್ತು ಅನೂಜ್ ಮೃತ ಶಿಕ್ಷಕರು. ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಅನೂಜ್, ಪಾಂಡೆಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಿರ್ಜಾಪುರದ ವಿಂಧ್ಯಾಚಲ್ ಪೊಲೀಸ್ ಠಾಣೆ ಪ್ರದೇಶದ ರಾಪುರಿ ಗ್ರಾಮದ ಬಾವಿಯೊಂದರಲ್ಲಿ ಶಿಕ್ಷಕ ಸೂರಜ್ ಪಾಂಡೆ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದು, ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ. ಪಾಂಡೆ ಜೊತೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇಬ್ಬರು ಸಹ ಶಿಕ್ಷಕರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸೂರಜ್ ಪಾಂಡೆ, ಅನೂಜ್ ಮತ್ತು ರತ್ನೇಶ್ ಮೂವರು ಖುರೈತಿ ಎಂಬ ಸಾರ್ವಜನಿಕ ಶಾಲೆಯಲ್ಲಿ ಖಾಸಗಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಪಾಂಡೆ ಮತ್ತು ಅನೂಜ್ ಒಳ್ಳೆಯ ಸ್ನೇಹಿತರಾಗಿದ್ದರು. ಅನೂಜ್ ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಎರಡು ತಿಂಗಳಿನಿಂದ ಅದೇ ಹುಡುಗಿ ಮೃತ ಪಾಂಡೆ ಜೊತೆ ಫೋನ್‍ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಳು. ಈ ವಿಚಾರ ಅನೂಜ್‍ಗೆ ಗೊತ್ತಾಗಿ ಆಕೆಯ ಜೊತೆ ಫೋನಿನಲ್ಲಿ ಮಾತಾಡಬೇಡ ಎಂದು ಪಾಂಡೆಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಸೂರಜ್ ಪಾಂಡೆ ಆತನ ಮಾತನ್ನು ಕಡೆಗಣಿಸಿದ್ದಾನೆ.

ಕೊನೆಗೆ ಅನೂಜ್ ತನ್ನ ಗೆಳೆಯ ರತ್ನೇಶ್ ಜೊತೆ ಸೇರಿ ಫೆ. 11ರಂದು ಮಫ್ಲರ್ ನಿಂದ ಪಾಂಡೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೇ ಪಾಂಡೆಯ ಬೈಕನ್ನು ಸುಮಾರು 2 ಕಿ.ಮೀ ದೂರಕ್ಕೆ ಎಸೆದಿದ್ದಾನೆ. ಇತ್ತ ಕೊಲೆ ಮಾಡಿದ ಮರುದಿನ ಅನೂಜ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಸೂರಜ್ ಪಾಂಡೆ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದೆವು. ಸೂರಜ್ ಪಾಂಡೆ ಕುಟುಂಬದವರು ಮತ್ತು ಸ್ಥಳೀಯರು ಅನೂಜ್ ಮತ್ತು ಸೂರಜ್ ಬೈಕಿನಲ್ಲಿ ಹೋಗಿದ್ದನ್ನು ನೋಡಿದ್ದರು. ಹೀಗಾಗಿ ಪೊಲೀಸರು ಕೂಡ ಆರೋಪಿ ಅನೂಜ್‍ನನ್ನು ಹುಡುಕುತ್ತಿದ್ದರು. ಆದರೆ ಅನೂಜ್ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯಕ್ಕೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ನೇಹಿತ ರತ್ನೇಶ್‍ನನ್ನು ಬಂಧಿಸಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೃತ ಸೂರಜ್ ಪಾಂಡೆಯ ಬೈಕನ್ನು ಸಹ ವಶಪಡಿಸಿಕೊಂಡಿದ್ದೇವೆ. ಒಂದೇ ಹುಡುಗಿಯನ್ನು ಇಬ್ಬರು ಪ್ರೀತಿ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಎಸ್‍ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.

Comments are closed.