ರಾಷ್ಟ್ರೀಯ

ಹುಡುಗಿಯರನ್ನು ಆಕರ್ಷಿಸಲು ಎದೆ, ತೋಳು, ಭುಜಗಳನ್ನು ಮಾತ್ರವೇ ಬಲಪಡಿಸಿಕೊಂಡೆ: ಆಂಡ್ರೆ ರಸೆಲ್‌

Pinterest LinkedIn Tumblr


ಹೊಸದಿಲ್ಲಿ: ಪ್ರೇಮಿಗಳ ದಿನಾಚರಣೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಆಂಡ್ರೆ ರಸೆಲ್‌ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಹುಡುಗೀರ ಗಮನ ಸೆಳೆಯಲು ಹೋಗಿ ಫಿಟ್ನೆಸ್‌ ಕಳೆದುಕೊಂಡ ಕುರಿತಾಗಿ ಮುಕ್ತವಾಗಿ ಮಾತನಾಡಿದ್ದಾರೆ.

ಟಿ20 ಕ್ರಿಕೆಟ್‌ನ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ 31 ವರ್ಷದ ಜಮೈಕನ್‌ ಆಲ್‌ರೌಂಡರ್‌ ರಸೆಲ್‌, ಕಳೆದ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೆಕೆಆರ್‌ ಪರ ಅಬ್ಬರಿಸಿದ್ದನ್ನು ಕಂಡು ಇಡೀ ಕ್ರಿಕೆಟ್‌ ಜಗತ್ತೇ ನಿಬ್ಬೆರಗಾಗಿತ್ತು. ಆದರೆ, ರಸೆಲ್‌ಗೆ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಸಮಯದಲ್ಲಿ ಗಾಯದ ಸಮಸ್ಯೆಗಳು ಕಾಡಲಾರಂಭಿಸಿರುವುದು ವಿಶಾದದ ಸಂಗತಿ.

ಕಳೆದ ವರ್ಷ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ರಸೆಲ್‌, ಬಳಿಕ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಅಂಥದ್ದೇ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದಕ್ಕೆ ಅವರ ಮಂಡಿ ನೋವಿನ ಸಮಸ್ಯೆಯೇ ಕಾರಣ. ತಮಗೆ ಆಗಾಗ ಕಾಡುತ್ತಲೇ ಇರುವ ಮಂಡಿ ನೋವಿನ ಸಮಸ್ಯೆಗೆ ಅಸಲಿ ಕಾರಣ ಏನೆಂಬುದನ್ನು ರಸೆಲ್‌ ಕೊನೆಗೂ ಬಾಯ್ಬಿಟ್ಟಿದ್ದಾರೆ.

“ಮತ್ತೊಬ್ಬ ಆಂಡ್ರೆ ರಸೆಲ್‌ ಆಗುವ ಕನಸು ಕಾಣುತ್ತಿರುವವರು ನಾನು ಮಾಡಿದ ತಪ್ಪನ್ನು ಮಾಡಬೇಡಿ. ನನಗೆ 23-24ನೇ ವಯಸ್ಸಿನಲ್ಲಿ ಮಂಡಿ ನೋವು ಶುರುವಾಗಿತ್ತು. ಈ ಬಗ್ಗೆ ನಾನು ಯಾರ ಬಳಿಯಾದರೂ ಹೇಳಿಕೊಂಡಿದ್ದರೆ ಅವರು, ನೋಡು ನೀನು ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಮುಂದುವರಿಯಬೇಕಿದ್ದರೆ ಮೊದಲು ನಿನ್ನ ಮಂಡಿಯ ಬಲ ಹೆಚ್ಚಿಸಿಕೊಳ್ಳಬೇಕು ಎಂದಿರುತ್ತಿದ್ದರು. ಅದು ಸಾಧ್ಯವಾಗಿದ್ದರೆ ಇಂದು ನಾಣು ಮಂಡಿ ನೋವು ಅನುಭವಿಸುತ್ತಿರಲಿಲ್ಲ. ಅದಕ್ಕೆ ಶಸ್ತ್ರಚಿಕಿತ್ಸೆಗೂ ಒಳಪಡುವಂತಾಗುತ್ತಿರಲಿಲ್ಲ. ಆದರೆ, 23ನೇ ವಯಸ್ಸಿನಲ್ಲಿ ಯಾವುದೇ ಭಯ ಇರುವುದಿಲ್ಲ. ಮಂಡಿ ನೋವು ಬಂದರೆ ಅದನ್ನು ನಿರ್ಲಕ್ಷಿಸಿ, ನೋವು ನಿವಾರಕ ಗುಳುಗೆ ಸೇವಿಸಿ ಓಡಲು ಆರಂಭಿಸುತ್ತಿದ್ದೆ,” ಎಂದು ಹೇಳಿದ್ದಾರೆ.

30ರ ಹರೆಯಕ್ಕೆ ಕಲಿಡುವ ಸಂದರ್ಭದಲ್ಲಿ ನನಗೆ ಹಿಂದೆಂದು ಅನುಭವಿಸದಂತಹ ಮಂಡಿ ನೋವು ಕಾಡಲು ಶುರುವಾಯಿತು. ನನ್ನ ಕಾಲುಗಳ ಶಕ್ತಿ ಹೆಚ್ಚಿಸಿಕೊಳ್ಳುವ ವ್ಯಾಯಾಮ ಮಾಡಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ಮತ್ತಷ್ಟು ಫಿಟ್‌ ಆಗಿರುತ್ತಿದ್ದೆ. ಆದರೆ, ಹುಡುಗಿಯರನ್ನು ಆಕರ್ಶಿಸಲು ಕಾಲುಗಳ ವ್ಯಾಯಾಮದ ಕಡೆಗೆ ನಾನು ಗಮನ ನೀಡಲೇ ಇಲ್ಲ. ಕೇವಲ ಎದೆ, ತೋಳು ಮತ್ತು ಭುಜಗಳನ್ನು ಮಾತ್ರವೇ ಬಲಪಡಿಸಿಕೊಂಡೆ,” ಎಂದು ತಮ್ಮ ಗಾಯದ ಸಮಸ್ಯೆ ಹಿಂದಿನ ಸತ್ಯವನ್ನು ಡ್ರೇ ರಸ್‌ ಖ್ಯಾತಿಯ ಆಟಗಾರ ಬಿಚ್ಚಿಟ್ಟಿದ್ದಾರೆ.

“ಯುವಕರು ಶರೀರದ ಮೇಲ್ಭಾಗವನ್ನು ಮಾತ್ರ ಬಲಪಡಿಸಿಕೊಳ್ಳುವ ಕಡೆಗೆ ಗಮನ ನೀಡಬಾರದು. ನಾನು ಜಿಮ್‌ ಸೇರಿದಾಗ ಆಬ್ಸ್‌, ಬೈಸೆಪ್ಸ್‌, ಶೋಲ್ಡರ್ಸ್‌ ಕಡೆಗಷ್ಟೇ ಗಮನ ನೀಡಿ ಹುಡುಗೀಯರಿಗೆ ಮಾದಕವಾಗಿ ಕಾಣಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಕೊನೆಗೆ ದೇಹವೇನೋ ಮಾದಕವಾಗಿದೆ ಆದರೆ ಕಾಲುಗಳು ದುರ್ಬಲವಾಗಿವೆ. ಹೀಗಾಗಿ ಶರೀರದ ಎಲ್ಲಾ ಭಾಗಗಳಿಗೆ ವ್ಯಾಯಾಮ ಮಾಡುವುದು ಮುಖ್ಯ. ನಾನು ನನ್ನ ಕಾಲುಗಳ ಕಡೆಗೆ ಗಮನ ನೀಡಿದ್ದರೆ ಈಗ ಅದ್ಭುತಗಳನ್ನು ಮಾಡುವ ಸಾಮರ್ಥ್ಯ ನನ್ನಲ್ಲಿರುತ್ತಿತ್ತು,” ಎಂದು ರಸೆಲ್‌ ಯುವ ಪೀಳಿಗೆಗೆ ಅಗತ್ಯದ ಸಲಹೆಯೊಂದನ್ನು ನೀಡಿದ್ದಾರೆ.

“ಮಂಡಿ ನೋವಿನ ಕಾರಣ ನಾನು ಕ್ರೀಸ್‌ನಲ್ಲಿ ನಿಂತು ಫೋರ್‌-ಸಿಕ್ಸರ್‌ಗಳನ್ನು ಮಾತ್ರವೇ ಹೊಡೆಯಬಲ್ಲೆ ಓಡಿ ರನ್‌ಗಳಿಸುವುದು ನನ್ನಿಂದ ಕಷ್ಟ. ಇದಕ್ಕೆ ನನ್ನ ಮಂಡಿ ನೆರವಾಗುವುದಿಲ್ಲ,” ಎಂದು ಹೇಳಿಕೊಂಡಿದ್ದಾರೆ. ಐಪಿಎಲ್‌ 2020 ಟೂರ್ನಿ ಸಲುವಾಗಿ ರಸೆಲ್‌ ಶೀಘ್ರವೇ ಭಾರತಕ್ಕೆ ಆಗಮಿಸಲಿದ್ದು, 13ನೇ ಆವೃತ್ತಿಯ ಐಶಾರಾಮಿ ಕ್ರಿಕೆಟ್‌ ಕದನ ಮಾರ್ಚ್‌ 29ರಂದು ಮುಂಬೈನಲ್ಲಿ ಶುರುವಾಗಲಿದೆ.

Comments are closed.