ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್​ ರಚಿಸುವುದಾಗಿ ಸಂಸತ್​ನಲ್ಲಿ ಪ್ರಧಾನಮಂತ್ರಿ ಮೋದಿ ಘೋಷಣೆ

Pinterest LinkedIn Tumblr

ನವದೆಹಲಿ: ಅಯೋಧ್ಯೆಯ ವಿವಾದಿತ ಜಾಗವನ್ನು ರಾಮ್​ಲಲ್ಲಾಗೆ ನೀಡಿ ಕಳೆದ ವರ್ಷ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಮೂಲಕ ಶತಮಾನಗಳ ಹಿಂದಿನ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಟ್ರಸ್ಟ್​ ರಚಿಸುವುದಾಗಿ ಸಂಸತ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಂದು ಈ ಬಗ್ಗೆ ಸಂಸತ್​ ಅಧಿವೇಶನದಲ್ಲಿ ಘೋಷಣೆ ಮಾಡಿರುವ ಪ್ರಧಾನಿ ಮೋದಿ, ‘ ಅಯೋಧ್ಯೆ ಟ್ರಸ್ಟ್​ ರಚಿಸುವ ಬಗ್ಗೆ ಇಂದು ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ನಾವೆಲ್ಲರೂ ಒಮ್ಮತದಿಂದ ನಿರ್ಧಾರ ತೆಗೆದುಕೊಂಡಿದ್ದೇವೆ. ಸುಪ್ರೀಂ ಕೋರ್ಟ್​ ನೀಡಿರುವ ಆದೇಶದಂತೆ ನಾವು ಟ್ರಸ್ಟ್​ ರಚಿಸಲಿದ್ದೇವೆ. ಆ ಟ್ರಸ್ಟ್​ಗೆ ‘ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಎಂದು ಹೆಸರಿಡಲಿದ್ದೇವೆ. ಇದು ಸಂಪೂರ್ಣವಾಗಿ ಸ್ವಾಯತ್ತ ಟ್ರಸ್ಟ್​ ಆಗಿ ಕಾರ್ಯ ನಿರ್ವಹಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ರಾಮ ಮಂದಿರ ಭಕ್ತಾದಿಗಳಿಗೆ ಅನುಕೂಲವಾಗಲೆಂದು ನಾವು ಮತ್ತೊಂದು ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಮ ಮಂದಿರ ನಿರ್ಮಾಣವಾಗುವ ಜಾಗದ ಪಕ್ಕದಲ್ಲೇ ಕೇಂದ್ರ ಸರ್ಕಾರದಿಂದ ಟ್ರಸ್ಟ್​ಗೆ 67 ಹೆಕ್ಟೇರ್ ಜಾಗವನ್ನು ನೀಡಲಾಗುವುದು ಎಂದು ಕೂಡ ಪ್ರಧಾನಿ ಮೋದಿ ಘೋಷಿಸಿದ್ದಾರೆ.

2019ರ ನವೆಂಬರ್​ನಲ್ಲಿ ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ವಿವಾದಿತ ಜಾಗ ರಾಮ್​ಲಲ್ಲಾಗೆ ಸೇರಿದ್ದು ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಟ್ರಸ್ಟ್​ ಮೂಲಕ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಎಂದು ಆದೇಶ ಹೊರಡಿಸಿತ್ತು. ಹಾಗೇ, ಸುನ್ನಿ ವಕ್ಫ್​ ಬೋರ್ಡ್​ಗೆ ಉತ್ತರ ಪ್ರದೇಶದ ಪ್ರಮುಖ ಜಾಗದಲ್ಲಿ 5 ಎಕರೆ ಜಾಗವನ್ನು ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ತೀರ್ಪು ಪ್ರಕಟವಾದ 3 ತಿಂಗಳೊಳಗೆ ಕೇಂದ್ರ ಸರ್ಕಾರ ಟ್ರಸ್ಟ್​ ರಚಿಸಬೇಕೆಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಟ್ರಸ್ಟ್​ ರಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ

Comments are closed.