ರಾಷ್ಟ್ರೀಯ

ಮಹಿಳೆಯರು ಯುವತಿಯ ಬಟ್ಟೆ ಬಿಚ್ಚಿ ಖಾರದ ಪುಡಿ ಹಾಕಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಗಾಂಧಿನಗರ: ಮೂವರು ಮಹಿಳೆಯರು ಯುವತಿಯೊಬ್ಬಳ ಖಾಸಗಿ ಭಾಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

ಅಹಮದಾಬಾದ್‍ನ ವಡಾಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಮೂವರು ಮಹಿಳೆಯರು ತನ್ನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬರು ನನ್ನ ಮಾಜಿ ಪ್ರಿಯತಮನ ಪತ್ನಿ ಸೇರಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಪೊಲೀಸರು ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ಸುಮಾರು ನಾಲ್ಕು ವರ್ಷಗಳ ಹಿಂದೆ ಆರೋಪಿಗಳಲ್ಲಿ ಮಹಿಳೆಯೊಬ್ಬಳ ಪತಿಯೊಂದಿಗೆ ಸಂಬಂಧ ಹೊಂದಿದ್ದಳು. ಜಾನು ಗೋಸ್ವಾಮಿಯ ಪತಿ ಗಿರೀಶ್ ಗೋಸ್ವಾಮಿಯ ಅಂಗಡಿಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಯುವತಿ ಮತ್ತು ಗೋಸ್ವಾಮಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳು ಕಾಲ ಸಂಬಂಧದಲ್ಲಿದ್ದರು. ನಂತರ ಯುವತಿ ಕೆಲಸ ಬಿಟ್ಟು ವಸ್ತ್ರಪುರದ ಮತ್ತೊಂದು ಗಾರ್ಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು.

ಈ ಮಧ್ಯೆ ಗಿರೀಶ್‍ಗೆ ಜಾನು ಜೊತೆ ಮದುವೆಯಾಗಿತ್ತು. ಗಿರೀಶ್ ಎರಡು ತಿಂಗಳ ಹಿಂದೆ ಯುವತಿಯನ್ನು ಮತ್ತೆ ಸಂಪರ್ಕಿಸಿ ಇಬ್ಬರು ಮಾತನಾಡಲು ಶುರು ಮಾಡಿದ್ದರು. ಇದರ ಬಗ್ಗೆ ಗಿರೀಶ್ ಪತ್ನಿ ಜಾನುಗೆ ಗೊತ್ತಾಗಿದೆ. ಆಗ ಯುವತಿಗೆ ಪತಿಯ ಜೊತೆ ಮಾತನಾಡಬಾರದು ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ವಡಾಜ್ ನಿವಾಸದಿಂದ ಪ್ರಗತಿನಗರಕ್ಕೆ ಹೋಗುತ್ತಿದ್ದೆ. ಆಗ ಸ್ಕೂಟಿಯಲ್ಲಿ ಜಾನು ಮತ್ತು ಆಕೆಯ ಸ್ನೇಹಿತೆ ನನ್ನನ್ನು ತಡೆದರು. ನಂತರ ನನ್ನನ್ನು ಅವರ ಜೊತೆ ಬಲವಂತವಾಗಿ ಇನ್ನೊಬ್ಬ ಮಹಿಳೆಯ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನನ್ನ ಬಟ್ಟೆಗಳನ್ನು ಬಿಚ್ಚಿ ಮೆಣಸಿನ ಪುಡಿಯನ್ನು ನನ್ನ ಖಾಸಗಿ ಭಾಗಕ್ಕೆ ಹಾಕಿದರು. ನಾನು ನೋವಿನಿಂದ ಅಳುತ್ತಿದ್ದಾಗ ಮೂವರು ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಅಷ್ಟೇ ಅಲ್ಲದೇ ಗಿರೀಶ್‍ನನ್ನು ಮತ್ತೆ ಭೇಟಿಯಾದರೆ ಮುಖಕ್ಕೆ ಆಸಿಡ್ ಹಾಕುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ವಿರುದ್ಧ ಅಪಹರಣ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.