ರಾಷ್ಟ್ರೀಯ

ಬೋಡೋ ಒಪ್ಪಂದಕ್ಕೆ ಕೇಂದ್ರ ಮತ್ತು ಬಂಡುಕೋರರ ಸಹಿ

Pinterest LinkedIn Tumblr


ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಪ್ರತ್ಯೇಕ ಬೋಡೋ ಲ್ಯಾಂಡ್ ಹೋರಾಟ ನಡೆಸುತ್ತಿದ್ದ ಅಸ್ಸಾಂನ ಬೋಡೋ ಜನರ ಬೇಡಿಕೆ ಕೊನೆಗೂ ತಾರ್ಕಿಕ ಅಂತ್ಯಕಂಡಿದ್ದು, ಸೋಮವಾರ ಬೋಡೋ ವಿವಾದ ಪರಿಹರಿಸುವ ನಿಟ್ಟಿನಲ್ಲಿ ನಿಷೇಧಿತ ಬಂಡುಕೋರ ಸಂಘಟನೆ ಎನ್ ಡಿಎಫ್ ಬಿ, ಎಬಿಎಸ್ ಯು ಸಂಘಟನೆ ಜತೆಗಿನ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ.

ಬೋಡೋ ಲ್ಯಾಂಡ್ ಬೇಡಿಕೆಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಬೋಡೋ ಲ್ಯಾಂಡ್ ಇನ್ಮುಂದೆ ಬೋಡೋಲ್ಯಾಂಡ್ ಟೆರ್ರಿಟೋರಿಯಲ್ ರೀಜನ್ (ಬಿಟಿಆರ್) ಎಂದು ಕರೆಯಲ್ಪಡಲಿದೆ. ಅಲ್ಲದೇ ಆಡಳಿತಾತ್ಮಕವಾಗಿ ಹೆಚ್ಚಿನ ಅಧಿಕಾರ ಲಭ್ಯವಾಗಲಿದೆ ಎಂದು ವರದಿ ವಿವರಿಸಿದೆ.

ಬೋಡೋಲ್ಯಾಂಡ್ ನ ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೋನೋವಾಲ್, ಎನ್ ಡಿಎಫ್ ಬಿ, ಎಬಿಎಸ್ ಯುನ ಪ್ರಮುಖ ನಾಯಕರು, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಗರ್ಗ್ ಮತ್ತು ಅಸ್ಸಾಂ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.

ಅಸ್ಸಾಂನಲ್ಲಿ ಕಳೆದ ಹಲವು ವರ್ಷಗಳಲ್ಲಿ ಬೋಡೋ ಬಂಡುಕೋರರ ಹಿಂಸಾಚಾರಕ್ಕೆ 4 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ಮುಂದೆ ಬೋಡೋ ಲ್ಯಾಂಡ್ ಅಭಿವೃದ್ಧಿಯ ಪಥ ಕಾಣಲಿದೆ ಎಂದು ಶಾ ಈ ಸಂದರ್ಭದಲ್ಲಿ ಹೇಳಿದರು.

ಇಂದು ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಬೋಡೋ ಪ್ರತಿನಿಧಿಗಳ ಜತೆ ಮುಖ್ಯವಾದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಿಂದ ಅಸ್ಸಾಂ ಮತ್ತು ಬೋಡೋ ಜನರಿಗೆ ಭವಿಷ್ಯದಲ್ಲಿ ಸುವರ್ಣ ಅವಕಾಶ ಒದಗಲಿದೆ. ಜನವರಿ 30ರಂದು 1550 ಬಂಡುಕೋರರು 130 ಶಸ್ತ್ರಾಸ್ತ್ರಗಳ ಜತೆ ಶರಣಾಗಲಿದ್ದಾರೆ. ಹಿಂಸಾಚಾರ ಬಿಟ್ಟು ಶರಣಾಗುವ ಎಲ್ಲಾ ಬಂಡುಕೋರ ಪ್ರತಿನಿಧಿಗಳಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಸೂಕ್ತ ಸಮಯದಲ್ಲಿ ಈಡೇರಿಸಲಾಗುವುದು ಎಂದು ಶಾ ತಿಳಿಸಿದರು.

Comments are closed.