ರಾಷ್ಟ್ರೀಯ

ಎಷ್ಟೇ ಪ್ರತಿಭಟನೆ ನಡೆದರೂ ಸಿಎಎ ಹಿಂಪಡೆಯಲ್ಲ: ಅಮಿತ್‌ ಶಾ

Pinterest LinkedIn Tumblr


ಲಖನೌ: ‘‘ನೀವೆಷ್ಟೇ ಪ್ರತಿಭಟನೆ ಮಾಡಿದರೂ ಸರಿ, ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಿಂಪಡೆಯುವ ಪ್ರಶ್ನೆಯೇ ಇಲ್ಲ,’’ ಎಂದು ಪ್ರತಿಪಕ್ಷಗಳಿಗೆ ಖಡಕ್‌ ಸಂದೇಶ ರವಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ತಾಕತ್ತಿದ್ದರೆ ಸಿಎಎ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಎಂದು ಪ್ರತಿಪಕ್ಷಗಳ ನಾಯಕರಿಗೆ ಸವಾಲು ಹಾಕಿದ್ದಾರೆ.

ಉತ್ತರ ಪ್ರದೇಶದ ಲಖನೌದಲ್ಲಿಸಿಎಎ ಪರ ರಾರ‍ಯಲಿಯನ್ನು ಉದ್ದೇಶಿಸಿ ಅವರು, ‘‘ಸಿಎಎ ಮುಸ್ಲಿಂ ವಿರೋಧಿಯಲ್ಲ. ಪ್ರತಿಪಕ್ಷಗಳು ರಾಜಕೀಯದ ಅನುಕೂಲತೆಗೆ ತಕ್ಕಂತೆ ಕಾಯಿದೆಯನ್ನು ವ್ಯಾಖ್ಯಾನಿಸಿ ಮುಸ್ಲಿಮರಲ್ಲಿಭಯ ಸೃಷ್ಟಿಸುತ್ತಿವೆ. ಆದರೆ ಒಂದಂತೂ ನಿಜ, ಪ್ರತಿಪಕ್ಷಗಳು ಅದೆಷ್ಟೇ ಪ್ರತಿಭಟನೆಗಳನ್ನು ನಡೆಸಿದರೂ ನಾವು ಹೆದರಲ್ಲ, ನಾವು ಈ ನೆಲದಲ್ಲಿಯೇ ಜನಿಸಿದವರು. ಸರಕಾರ ಸಿಎಎಅನ್ನು ಯಾವ ಕಾರಣಕ್ಕೂ ಹಿಂಪಡೆಯಲ್ಲ,’’ ಎಂದು ಹೇಳಿದರು.

‘‘ಸಿಎಎ ದೇಶದ ಯಾವುದೇ ಪ್ರಜೆಯ ಪೌರತ್ವ ಕಸಿದುಕೊಳ್ಳುತ್ತಿದೆ ಎಂಬ ಅನುಮಾನ ನಿಮಗಿದ್ದರೆ ಅದನ್ನು ನಮ್ಮೊಂದಿಗೆ ಚರ್ಚೆಗೆ ಬಂದು ತೋರಿಸಿ ನೋಡೋಣ. ಮತಬ್ಯಾಂಕ್‌ ರಾಜಕಾರಣಕ್ಕೆ ಕಾಯಿದೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ. ನಿಮ್ಮ ಕಪಟತೆಯನ್ನು ಬಿಜೆಪಿಯ ಸಿಎಎ ಪರವಾದ ‘ಜನ ಜಾಗೃತಿ ಅಭಿಯಾನ’ ಬಯಲು ಮಾಡಲಿದೆ,’’ ಎಂದು ಕುಟುಕಿದರು.

ಎಲ್ಲಿ ಹೋಗಿತ್ತು ಕಾಳಜಿ?

ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್‌ ಸಮುದಾಯದವರು ಧಾರ್ಮಿಕ ಅಲ್ಪಸಂಖ್ಯಾತರೇ ಹೊರತು ಮುಸ್ಲಿಮರಲ್ಲ. ಈ ಆರು ಧರ್ಮದವರು ಧಾರ್ಮಿಕ ಶೋಷಣೆ ಅನುಭವಿಸಿದಾಗ, ಧರ್ಮಾಧಾರಿತ ಹತ್ಯೆಗಳು ನಡೆದಾಗ ಕಾಂಗ್ರೆಸ್‌ ಕಾಳಜಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಜನವರಿ 16ರಂದು ಬಿಹಾರದ ವೈಶಾಲಿಯಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿ ಅಮಿತ್‌ ಶಾ ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾರೂಪ ಪಡೆದುಕೊಳ್ಳಲು ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳ ಪ್ರಚೋದನೆಯೇ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.

Comments are closed.