ರಾಷ್ಟ್ರೀಯ

ಯುವತಿಯಿಂದ ವಿಮಾನದಲ್ಲಿ ಬಾಂಬ್ ಸ್ಫೋಟದ ಬೆದರಿಕೆ

Pinterest LinkedIn Tumblr


ಕೊಲ್ಕತಾ (ಜ.13): ಯಾವ ಕ್ಷಣದಲ್ಲಿ ಬೇಕಾದರೂ ಬಾಂಬ್ ಸ್ಫೋಟವಾಗಿ ವಿಮಾನದಲ್ಲಿರುವವರ ಜೀವ ಹೋಗಬಹುದು ಎಂದು ಪೈಲಟ್​ಗೆ ತಿಳಿಸಿದ ಪ್ರಯಾಣಿಕಳ ಮಾತು ಕೇಳಿ ವಿಮಾನದಲ್ಲಿ ಆತಂಕದ ಸ್ಥಿತಿ ಮನೆಮಾಡಿತ್ತು. ಭಯಭೀತರಾದ ಪೈಲಟ್ ಕೊಲ್ಕತಾದ ಏರ್​ಪೋರ್ಟ್​ಗೆ ವಿಮಾನವನ್ನು ತಿರುಗಿಸಿದ್ದರು. ಆದರೆ, ಕೊಲ್ಕತಾ ವಿಮಾನ ನಿಲ್ದಾಣಕ್ಕೆ ಮರಳಿದ ವಿಮಾನದಿಂದಿಳಿದ ಆ ಯುವತಿಯನ್ನು ತಪಾಸಣೆ ಮಾಡಿದಾಗ ಸಿಬ್ಬಂದಿಗೆ ಅಚ್ಚರಿ ಕಾದಿತ್ತು!

ಕೊಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಮುಂಬೈಗೆ ಹೊರಟಿದ್ದ ಏರ್ ಏಷ್ಯಾ ವಿಮಾನದಲ್ಲಿ 114 ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಗನಸಖಿಯ ಕೈಯಲ್ಲಿ ಪೈಲಟ್​ಗೆ ಚೀಟಿಯೊಂದನ್ನು ಕಳುಹಿಸಿದ್ದರು. ಆ ಚೀಟಿಯನ್ನು ನೋಡಿದ ಪೈಲಟ್​ಗೆ ಗಾಬರಿ ಉಂಟಾಗಿತ್ತು.

ನನ್ನ ಮೈಗೆ ಬಾಂಬ್ ಸುತ್ತಿ ಕಳುಹಿಸಲಾಗಿದೆ. ನಾನು ಈ ಬಾಂಬ್ ಅನ್ನು ಯಾವ ಕ್ಷಣದಲ್ಲಿ ಬೇಕಾದರೂ ಸ್ಫೋಟಿಸಬಹುದು ಎಂದು ಆ ಚೀಟಿಯಲ್ಲಿ ಬರೆದಿದ್ದ ಯುವತಿ ತಿಳಿಸಿದ್ದ ವಿಷಯ ಕೇಳಿ ವಿಮಾನದ ಪೈಲಟ್ ಮತ್ತು ಸಿಬ್ಬಂದಿಯಲ್ಲಿ ಆತಂಕ ಶುರುವಾಗಿತ್ತು. ವಿಮಾನದಲ್ಲಿರುವ 114 ಪ್ರಯಾಣಿಕರ ಪ್ರಾಣ ಉಳಿಸುವುದು ಮುಖ್ಯವೆಂದು ನಿರ್ಧರಿಸಿದ ಪೈಲಟ್ ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕಿಸಿ ವಿಮಾನವನ್ನು ವಾಪಾಸ್ ಇಳಿಸಲು ಮಾರ್ಗದರ್ಶನ ನೀಡುವಂತೆ ಕೇಳಿದರು. ನಂತರ ತುರ್ತಾಗಿ ವಿಮಾನವನ್ನು ಕೊಲ್ಕತಾ ವಿಮಾನ ನಿಲ್ದಾಣದತ್ತ ತಿರುಗಿಸಿದರು.

ಅಷ್ಟರಲ್ಲಾಗಲೇ ವಿಷಯ ತಿಳಿದಿದ್ದರಿಂದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿ ಆ ಯುವತಿಯನ್ನು ವಶಕ್ಕೆ ಪಡೆದು ಆಕೆಯನ್ನು ಮತ್ತೊಮ್ಮೆ ತಪಾಸಣೆ ನಡೆಸಿದರು. ಆದರೆ, ವೈದ್ಯಕೀಯ ತಪಾಸಣೆ ವೇಳೆಯೂ ಆಕೆಯ ದೇಹದಲ್ಲಿ ಯಾವುದೇ ಸ್ಫೋಟಕ ವಸ್ತುವಾಗಲಿ, ಬಾಂಬ್ ಆಗಲಿ ಕಂಡುಬರಲಿಲ್ಲ. ಆದರೆ, ಆಕೆ ಮದ್ಯ ಸೇವಿಸಿರುವುದು ತಪಾಸಣೆ ವೇಳೆ ಗೊತ್ತಾಯಿತು, ಇದರಿಂದ ಗೊಂದಲಕ್ಕೊಳಗಾದ ಸಿಐಎಸ್​ಎಫ್ ಸಿಬ್ಬಂದಿ ಆಕೆಯ ವಿಚಾರಣೆ ನಡೆಸಿದಾಗ ಆಕೆ ಕೊಲ್ಕತಾಗೆ ವಾಪಾಸ್ ಬರಬೇಕಾಗಿತ್ತು. ಹೀಗಾಗಿ, ಬಾಂಬ್ ಸ್ಫೋಟಿಸುವ ಬೆದರಿಕೆಯೊಡ್ಡಿದ್ದಳು ಎಂಬ ವಿಷಯ ತಿಳಿದುಬಂದಿದೆ.

ಸುಳ್ಳು ಹೇಳಿ ಕೊಲ್ಕತಾ ವಿಮಾನ ನಿಲ್ದಾಣಕ್ಕೆ ವಾಪಾಸಾದ ಯುವತಿಯನ್ನು ಮೋಹಿನಿ ಮೊಂಡಲ್ ಎಂದು ಗುರುತಿಸಲಾಗಿದೆ. ಸಾಲ್ಟ್​ ಲೇಕ್ ಏರಿಯಾದಲ್ಲಿ ವಾಸವಾಗಿರುವ ಈಕೆ ಯಾವ ಕಾರಣಕ್ಕಾಗಿ ಮುಂಬೈಗೆ ಹೊರಟಿದ್ದಳು ಮತ್ತು ಯಾವ ಉದ್ದೇಶದಿಂದ ಕೊಲ್ಕತಾಗೆ ವಾಪಾಸು ಬರಲು ನಿರ್ಧರಿಸಿದಳು ಎಂಬ ಬಗ್ಗೆ ಆಕೆಯ ಕುಟುಂಬಸ್ಥರ ಬಳಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Comments are closed.