ರಾಷ್ಟ್ರೀಯ

ಪ್ರಿಯತಮೆಯನ್ನ ತನ್ನ ಮನೆಗೆ ಕರೆಸಿಕೊಂಡು ಕತ್ತು ಸೀಳಿದ

Pinterest LinkedIn Tumblr


ಹೈದರಾಬಾದ್: ಪ್ರಿಯಕರನೊಬ್ಬ ತನ್ನ ಪ್ರೇಮಿಯ ಗಂಟಲು ಸೀಳಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ತೆಲಂಗಾಣದ ವಾರಂಗಲ್‍ನಲ್ಲಿ ನಡೆದಿದೆ.

ಲಷ್ಕರ್ ಸಿಂಗರಂ ಗ್ರಾಮದ ನಿವಾಸಿ ಹಾರತಿ ಮೃತ ಯುವತಿ. ಆರೋಪಿಯನ್ನು ಮೊಹಮ್ಮದ್ ಶಾಹಿದ್ ಎಂದು ಗುರುತಿಸಲಾಗಿದೆ. ಶಾಹಿದ್ ತನ್ನ ಬಾಡಿಗೆ ರೂಮಿಗೆ ಹಾರತಿಯನ್ನ ಕರೆದು ಅಲ್ಲಿ ಆಕೆಯ ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ಏನಿದು ಪ್ರಕರಣ?
ಆರೋಪಿ ಶಾಹಿದ್ ಮತ್ತು ಮೃತ ಹಾರತಿ ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದರು. ಆರೋಪಿ ಶಾಹಿದ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಹಾರತಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿ ಅನುಮಾನಪಟ್ಟಿದ್ದನು. ಈ ಬಗ್ಗೆ ಮಾತನಾಡಲು ಆತ ತನ್ನ ರೂಮಿಗೆ ಹಾರತಿಯನ್ನು ಬರುವಂತೆ ಹೇಳಿದ್ದಾನೆ.

ಹಾರತಿ ರೂಮಿಗೆ ಬಂದ ತಕ್ಷಣ ಈ ವಿಚಾರದ ಬಗ್ಗೆಯೇ ಚರ್ಚೆ ನಡೆದಿದೆ. ಆಗ ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ಕೋಪಗೊಂಡ ಶಾಹಿದ್, ಆಕೆಯ ಗಂಟಲನ್ನು ಸೀಳಿದ್ದಾನೆ. ಇದರಿಂದ ಹಾರತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ವಿ.ರವೀಂದರ್ ತಿಳಿಸಿದ್ದಾರೆ.

ಆರೋಪಿ ಪ್ರೇಮಿಯನ್ನು ಕೊಂದ ನಂತರ ನೇರವಾಗಿ ಕೇಂದ್ರ ಕಾರಾಗೃಹಕ್ಕೆ ಹೋಗಿದ್ದಾನೆ. ಅಲ್ಲಿ ತಾನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ತಕ್ಷಣ ಅಲ್ಲಿನ ಭದ್ರತಾ ಸಿಬ್ಬಂದಿ ಸುಬೇದಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸುಬೇದಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡ ಜೈಲಿಗೆ ಬಂದು ಆತನನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂದು ಹೋಗಿದ್ದಾರೆ.

ಅಲ್ಲಿಂದ ಪೊಲೀಸರು ಆರೋಪಿಯನ್ನು ಕೊಲೆ ಮಾಡಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹಾರತಿ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ. ಬಳಿಕ ಪೊಲೀಸರು ಆತನಿಂದಲೇ ಮಾಹಿತಿ ತಿಳಿದುಕೊಂಡು ಹಾರತಿಯ ಪೋಷಕರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

ಶಾಹಿದ್ ನಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದರೆ ನಾವು ನಂಬಲು ಸಾಧ್ಯವಿಲ್ಲ. ನಾವು ಅವನನ್ನು ತುಂಬಾ ದಿನಗಳಿಂದ ನೋಡಿದ್ದೇವೆ. ಅವನು ನಮ್ಮ ಮಗಳ ವಿಶ್ವಾಸಾರ್ಹ ಸ್ನೇಹಿತ. ಅಲ್ಲದೇ ಇತ್ತೀಚೆಗೆ ನಾವು ಮಗಳಿಗೆ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದೆವು. ಆಗ ಹಾರತಿ ಶಾಹಿದ್‍ನ ಇಷ್ಟಪಡುತ್ತಿರುವುದಾಗಿ ಹೇಳಿದಳು. ನಾವು ಕೂಡ ಅವರ ಮದುವೆಗೆ ಒಪ್ಪಿಗೆ ಸೂಚಿಸಿದೆವು. ಆದರೆ ಮದುವೆ ಬಗ್ಗೆ ಶಾಹಿದ್ ಜೊತೆ ಮಾತನಾಡಲು ನಾವು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆವು ಎಂದು ಮೃತ ಯುವತಿ ಪೋಷಕರು ಹೇಳಿದ್ದಾರೆ.

ಕಾಜಿಪೇಟೆಯ ಚೈತನ್ಯಪುರಿಯ ಮೂಲದ ಆರೋಪಿ ಶಾಹಿದ್ ಮತ್ತು ಹಾರತಿ ಇಬ್ಬರು ಒಂದೇ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಇಬ್ಬರು ಆಗಾಗ ನೇರವಾಗಿ ಮನೆಗೆ ಹೋಗಿ ಭೇಟಿಯಾಗುತ್ತಿದ್ದರು. ಇವರಿಬ್ಬರ ಸ್ನೇಹದ ಬಗ್ಗೆ ಮನೆಯವರಿಗೂ ತಿಳಿದಿತ್ತು. ಶುಕ್ರವಾರ ಹಾರತಿ ಕೆಲಸವಿದೆ ಎಂದು ಮನೆಯಿಂದ ಹೋಗಿದ್ದಳು. ನಂತರ ಆಕೆ ಶಾಹಿದ್ ಮನೆಗೆ ಹೋಗಿದ್ದಳು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.

Comments are closed.