ನವದೆಹಲಿ: ಜವಾಹರ್ ಲಾಲ್ ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ ವಿದ್ಯಾರ್ಥಿ ಹಾಗೂ ಪ್ರಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಹಿಂಸಾಚಾರ ಕೃತ್ಯದ ಹೊಣೆಯನ್ನು ಹಿಂದೂ ರಕ್ಷಾ ದಳ ಹೊತ್ತಿಕೊಂಡಿದೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಭುಪೇಂದ್ರ ತೋಮರ್ ಆಲಿಯಸ್ ಪಿಂಕಿ ಚೌಧರಿ, ಭಾನುವಾರ ರಾತ್ರಿ ಹಿಂದೂ ರಕ್ಷಾ ದಳ ಕಾರ್ಯಕರ್ತರು ಜೆಎನ್ಯು ಕ್ಯಾಂಪಸ್ಗೆ ನುಗ್ಗಿ ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋದಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದಿದ್ದಾರೆ.
ಜೆಎನ್ಯು ಕಮ್ಯೂನಿಸ್ಟರ ತಾಣವಾಗಿದ್ದು, ಈ ರೀತಿಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಅವರು ನಮ್ಮ ದೇಶ ಮತ್ತು ಧರ್ಮವನ್ನು ಬೈಯ್ದರು. ನಮ್ಮ ಧರ್ಮದ ಬಗ್ಗೆ ಅವರ ವರ್ತನೆ ರಾಷ್ಟ್ರ ವಿರೋಧಿಯಾಗಿದೆ. ಭವಿಷ್ಯದಲ್ಲಿ ಬೇರೆ ವಿವಿಗಳು ಯಾವುದಾದರೂ ಈ ರೀತಿ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ನಾವು ಕ್ರಮಕ್ಕೆ ಮುಂದಾಗುತ್ತೇವೆ ಎಂದು ವಿಡಿಯೋದಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ.
ಪಿಂಕಿ ಭಯ್ಯ ಎಂದೇ ಜನಪ್ರಿಯವಾಗಿರುವ ತೋಮರ್, ಬಲ ಪಂಥೀಯರಿಂದ ನಡೆದ ದಾಳಿ ಸಂಪೂರ್ಣ ಹೊಣೆ ಹೊತ್ತಿದೆ. ಅವರು ನಮ್ಮ ದೇಶದಲ್ಲಿ ನೆಲೆಸಿದ್ದಾರೆ. ಇಲ್ಲಿಯೇ ಊಟ ಮಾಡುತ್ತಾರೆ, ಇಲ್ಲಿನ ಶಿಕ್ಷಣ ಪಡೆಯುತ್ತಾರೆ. ಬಳಿಕ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಜೆಎನ್ಯು ದಾಳಿಯಲ್ಲಿ ಭಾಗಿಯಾದವರೆಲ್ಲ ನಮ್ಮ ಕಾರ್ಯಕರ್ತರು. ದೇಶಕ್ಕಾಗಿ ನಮ್ಮ ಜೀವ ತ್ಯಾಗಕ್ಕೂ ನಾವು ಸಿದ್ಧವಿದ್ದೇವೆ ಎಂದು 1 ನಿಮಿಷ 59 ಸೆಕೆಂಡ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹಿಂಸಾಚಾರದ ವೇಳೆ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಐಶೆ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಲ್ಲದೆ, ಆಕೆಯ ಜೊತೆಗಿದ್ದ ಇತರೆ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವರ್ಗದವರ ಮೇಲೂ ಹಲ್ಲೆ ನಡೆಸಲಾಗಿತ್ತು. ಘಟನೆ ಕುರಿತು ದೇಶಾದ್ಯಾಂತ ಖಂಡನೆ ವ್ಯಕ್ತವಾಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಕು ಕುರಿತು ದೆಹಲಿ ಪೊಲೀಸ್ ಮುಖ್ಯಸ್ಥರಿಂದ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದರು.
Comments are closed.