ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನೀಡಲಾಗಿದ್ದ ಬಿಗಿಭದ್ರತೆಯಿಂದಾಗಿ ಪರೋಕ್ಷವಾಗಿ ತೊಂದರೆಗೀಡಾಗಿದ್ದ ವಿದೇಶಿ ಯುವತಿಯೊಬ್ಬರಿಗೆ ಖುದ್ದು ಕೋವಿಂದ್ ಅವರೇ ನೆರವಿನ ಹಸ್ತ ಚಾಚಿರುವ ಅಪರೂಪದ ಘಟನೆ ವರದಿಯಾಗಿದೆ.
3 ತಿಂಗಳ ಹಿಂದೆ ವಿದೇಶಿ ಜೋಡಿಯೊಂದು ಕೊಚ್ಚಿಯ ತಾಜ್ ಹೋಟೆಲಿನಲ್ಲಿ ಜ.6ರಂದು ತಮ್ಮ ವಿವಾಹ ನೆರವೇರಿಸಿಕೊಳ್ಳಲು ನಿರ್ಧರಿಸಿ ಆ ಹೋಟೆಲ್ನ ಹಾಲ್ ಬುಕ್ ಮಾಡಿತ್ತು. ರಾಷ್ಟ್ರಪತಿ ಅದೇ ದಿನ ಲಕ್ಷದ್ವೀಪಕ್ಕೆ ಪ್ರವಾಸ ಹೊರಟಿದ್ದ ಹಿನ್ನೆಲೆಯಲ್ಲಿ ಮಾರ್ಗ ಮಧ್ಯೆ, ಅದೇ ಹೋಟೆಲಿನಲ್ಲಿ ತಂಗಲು ಏರ್ಪಾಟು ಮಾಡಲಾಗಿತ್ತು. ಅವರಿಗೆ ಬಿಗಿಭದ್ರತೆ ನೀಡಬೇಕಿರುವ ಕಾರಣ ವಿವಾಹ ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರಿಸಲು ಹೋಟೆಲಿನ ಆಡಳಿತಾಧಿಕಾರಿಗಳು ಯುವತಿಯನ್ನು ಕೋರಿದ್ದರು. ಇದರಿಂದ ಬೇಸತ್ತ ಆ ಯುವತಿ, ಕೋವಿಂದ್ ಅವರಿಗೆ ಟ್ವೀಟ್ ಮಾಡಿ, ಈ ಬಗ್ಗೆ ಸಹಾಯ ನೀಡುವಂತೆ ಕೋರಿದ್ದರು. ಅದಕ್ಕೆ ಸ್ಪಂದಿಸಿದ ರಾಷ್ಟ್ರಪತಿ ಭವನ, ರಾಷ್ಟ್ರಪತಿಯವರ ಭದ್ರತೆಯಿಂದ ವಿವಾಹಕ್ಕೆ ತೊಂದರೆ ಆಗಬಾರದು ಎಂದು ಹೋಟೆಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿ, ನವಜೋಡಿಗೆ ಶುಭಾಶಯವನ್ನೂ ಹೇಳಿದೆ. ವಿವಾಹ ಸಾಂಗವಾಗಿ ನೆರವೇರಿದೆ.
ರಾಷ್ಟ್ರಪತಿಯವರ ಈ ಸೌಜನ್ಯಕ್ಕೆ ಟ್ವೀಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
Comments are closed.