ರಾಷ್ಟ್ರೀಯ

ವೈಕುಂಠ ಏಕಾದಶಿ ನಂತರ ತಿರುಪತಿ ಲಡ್ಡು ಉಚಿತ ಜಾರಿ ಸಂಭವ

Pinterest LinkedIn Tumblr


ತಿರುಪತಿ: ತಿರುಮಲ ಯಾತ್ರಿಕರಿಗೆ ಹೊಸ ವರ್ಷದ ಗಿಫ್ಟ್‌ ಕೊಡಲು ಟಿಟಿಡಿ ತೀರ್ಮಾನಿಸಿದೆ. ದೇವರ ದರ್ಶನಕ್ಕೆ ಬರುವ ಪ್ರತಿ ಯಾತ್ರಿಕರಿಗೂ ಇನ್ನು ಮುಂದೆ ಉಚಿತ ಒಂದು ಲಡ್ಡು ವಿತರಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ‘ದೇವರ ಪ್ರಸಾದ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ’ ಎಂಬ ಆರೋಪವನ್ನೂ ದೂರ ಮಾಡಬಹುದು ಎನ್ನುವುದು ಟಿಟಿಡಿ ಲೆಕ್ಕಾಚಾರ. ‘ವೈಕುಂಠ ಏಕಾದಶಿ’ಯ ನಂತರ ಉಚಿತ ಲಡ್ಡು ವಿತರಣೆ ಜಾರಿಗೆ ಬರಲಿದೆ.

ಪ್ರಸ್ತುತ ಬರಿಗಾಲಲ್ಲಿ ಬೆಟ್ಟವನ್ನು ಏರುವವರಿಗೆ ಮಾತ್ರ ಒಂದು ಉಚಿತ ಲಡ್ಡುವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಟಿಟಿಡಿಯ ನೂತನ ಯೋಜನೆ ಚಾಲ್ತಿಗೆ ಬಂದರೆ ನಿತ್ಯ ದೇವರ ದರ್ಶನಕ್ಕೆಂದು ಬರುವ 80 ಸಾವಿರದಿಂದ ಒಂದು ಲಕ್ಷದವರೆಗಿನ ಯಾತ್ರಿಗಳಿಗೆ ಉಚಿತ ಲಡ್ಡು ಪ್ರಸಾದ ದೊರೆಯಲಿದೆ. ಪ್ರಸ್ತುತ 3 ಲಕ್ಷ ಲಡ್ಡುಗಳನ್ನು ತಿರುಮಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಟಿಟಿಡಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದೆ. ಹೆಚ್ಚುವರಿ ಲಡ್ಡು ಪ್ರಸಾದಕ್ಕಾಗಿ ಪ್ರತಿ ಲಡ್ಡುವಿಗೆ 50 ರೂ. ನಿಗದಿಪಡಿಸುವ ಉದ್ದೇಶವಿದೆ. ಈ ಮೊದಲು ಹೆಚ್ಚುವರಿ ಲಡ್ಡು ಪ್ರಸಾದ ಪಡೆಯಲು ಟಿಟಿಡಿ ಅಧಿಕಾರಿಗಳ ಅನುಮತಿ ಪತ್ರ ಪಡೆಯಬೇಕಿತ್ತು. ಹೊಸ ಯೋಜನೆಯಡಿ ಅನುಮತಿ ಪತ್ರದ ಅವಶ್ಯಕತೆ ಇರುವುದಿಲ್ಲ. ಕಳೆದ ನವೆಂಬರ್‌ನಲ್ಲಿ ಕಾಳಸಂತೆ ದರದಲ್ಲಿಲಡ್ಡು ಮಾರಾಟವಾಗುತ್ತಿದ್ದುದನ್ನು ಟಿಟಿಡಿಯ ವಿಚಕ್ಷಣಾ ದಳ ಪತ್ತೆ ಹಚ್ಚಿತ್ತು. ನವರಾತ್ರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ 14 ಲಕ್ಷ ರೂ. ಮೌಲ್ಯದ ಲಡ್ಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ನಡುವೆ, ತಿರುಮಲ ತಿರುಪತಿಯಲ್ಲೀಗ ವೈಕುಂಠ ಏಕಾದಶಿ ಸಂಭ್ರಮ. ದೇವಸ್ಥಾನದ ಸಂಪ್ರದಾಯದಂತೆ ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿಯಂದು ಮಾತ್ರ ವೈಕುಂಠ ದ್ವಾರ ತೆರೆಯಲು ಟಿಟಿಡಿ ನಿರ್ಧರಿಸಿದೆ. ಈ ಸಂಬಂಧ ಕಳೆದ ಭಾನುವಾರ ನಡೆದ ಟಿಟಿಡಿ ಸಭೆಯಲ್ಲಿ ದೇವಸ್ಥಾನದ ಸಂಪ್ರದಾಯವನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಮುನ್ನ ಹತ್ತು ದಿನಗಳ ಕಾಲ ಉತ್ತರ ದ್ವಾರ ತೆರೆಯಲು ಟಿಟಿಡಿ ತೀರ್ಮಾನಿಸಿತ್ತು. ಈ ಸಂಬಂಧ ಆಗಮಿಕ ಪಂಡಿತರ ಅಭಿಪ್ರಾಯವನ್ನು ಕೇಳಲಾಗಿತ್ತು.

300 ವರ್ಷಗಳ ಇತಿಹಾಸ
1715: ಲಡ್ಡು ಪ್ರಸಾದ ಆರಂಭವಾದ ವರ್ಷ
1,350 ಕೋಟಿ ರೂ. : ನಿತ್ಯ ಅನ್ನಸಂತರ್ಪಣೆಗೆ ಇರಿಸಿರುವ ಠೇವಣಿ
141 ಕೋಟಿ ರೂ. :ಕಳೆದ ವರ್ಷ ಅನ್ನಸಂತರ್ಪಣೆಗೆ ಸಂಗ್ರಹವಾದ ಹಣ
79 ಕೋಟಿ ರೂ.: ಅನ್ನ ಸಂತರ್ಪಣೆಗೆ ಬಡ್ಡಿ ರೂಪದಲ್ಲಿ ಬಂದ ಹಣ
99.9 ಕೋಟಿ ರೂ.: ಕಳೆದ ವರ್ಷ ಅನ್ನಪ್ರಸಾದಕ್ಕೆ ಮಾಡಿದ ವೆಚ್ಚ

Comments are closed.