ರಾಷ್ಟ್ರೀಯ

ಸಹಜ ಸ್ಥಿತಿಗೆ ಮರಳಿದ ಕಾಶ್ಮೀರ: ಇಂಟರ್​​ನೆಟ್​​ ಸೇವೆ ಆರಂಭ

Pinterest LinkedIn Tumblr


ನವದೆಹಲಿ(ಜ.01): 370ನೇ ವಿಧಿ ರದ್ದುಗೊಳಿಸಿದ ಐದು ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೊಬೈಲ್​​ ಎಸ್​​ಎಂಎಸ್​​(ಸಂದೇಶ) ಮತ್ತು ಇಂಟರ್​​ನೆಟ್​​ ಸೇವೆ ಆರಂಭವಾಗಿದೆ. ನಿನ್ನೆ ಮಂಗಳವಾರ(ಡಿ.31) ಮಧ್ಯರಾತ್ರಿಯಿಂದಲೇ ಎಸ್‌ಎಂಎಸ್ ಸೇವೆ ಪುನಾರಂಭ ಮಾಡಲಾಗಿದೆ. ಈ ಬೆನ್ನಲ್ಲೀಗ ಜಮ್ಮು-ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದತೆಯೇ ಇಂದು ಸಂಜೆ 5ಗಂಟೆಯಿಂದಲೇ ಇಂಟರ್​​ನೆಟ್​​​ ಸೇವೆಯೂ ಶುರುವಾಗಿದೆ.

ಕಣಿವೆ ರಾಜ್ಯ ಎನ್ನಲಾಗುತ್ತಿದ್ದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿತ್ತು. ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿತ್ತು. ಅಂತೆಯೇ ಕಳೆದ ಅಕ್ಟೋಬರ್​​​ 31ನೇ ತಾರೀಕು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಲೆಫ್ಟಿನೆಂಟ್ ಗವರ್ನರ್​ಗಳಾಗಿ ಗಿರೀಶ್ ಚಂದ್ರ ಮುರ್ಮು ಮತ್ತು ಆರ್​.ಕೆ. ಮಾಥೂರ್ ಅಧಿಕಾರ ಸ್ವೀಕರಿಸಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆಯಾದಂದೇ ಲೆ. ಗವರ್ನರ್​ಗಳು ಅಧಿಕಾರ ವಹಿಸಿಕೊಂಡಿದ್ದರು. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ರದ್ದುಗೊಳಿಸಬೇಕೆಂಬುದು ಸರ್ದಾರ್ ವಲ್ಲಭಭಾಯಿ ಪಟೇಲ್ ಕನಸಾಗಿತ್ತು. ಆ ಕನಸನ್ನು ಅವರ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿ ಜಾರಿಗೆ ತರಲು ಮುಂದಾದೆವು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

ಆಗಸ್ಟ್​ 5ರಂದು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಟ್ಟುನಿಟ್ಟಿನ ಬಂದೋಬಸ್ತ್​ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಪ್ರಮುಖ ರಾಜಕೀಯ ನಾಯಕರನ್ನು ಪೊಲೀಸ್​ ಕಣ್ಗಾವಲಿನಲ್ಲಿಯೇ ಇರಿಸಲಾಗಿತ್ತು. ಇಂಟರ್​ನೆಟ್​, ಮೊಬೈಲ್​ ಸೇವೆಗಳೂ ಸ್ಥಗಿತಗೊಂಡಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈಗಾಗಲೇ ಕೇಂದ್ರ ಸರ್ಕಾರ ಕೆಲವು ರಾಜಕಾರಣಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇನ್ನೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್​ ಅಬ್ದುಲ್ಲಾರನ್ನು ಬಿಡುಗಡೆ ಮಾಡಿಲ್ಲ. ಈ ಮಧ್ಯೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್​ ಎಸ್​ಎಂಎಸ್ ಸೇವೆ ಮತ್ತು ಇಂಟರ್​​ನೆಟ್​ ಸೇವೆಯೂ ಆರಂಭ ಮಾಡಲಾಗಿದೆ.

Comments are closed.