ನವದೆಹಲಿ(ಜ.01): 370ನೇ ವಿಧಿ ರದ್ದುಗೊಳಿಸಿದ ಐದು ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೊಬೈಲ್ ಎಸ್ಎಂಎಸ್(ಸಂದೇಶ) ಮತ್ತು ಇಂಟರ್ನೆಟ್ ಸೇವೆ ಆರಂಭವಾಗಿದೆ. ನಿನ್ನೆ ಮಂಗಳವಾರ(ಡಿ.31) ಮಧ್ಯರಾತ್ರಿಯಿಂದಲೇ ಎಸ್ಎಂಎಸ್ ಸೇವೆ ಪುನಾರಂಭ ಮಾಡಲಾಗಿದೆ. ಈ ಬೆನ್ನಲ್ಲೀಗ ಜಮ್ಮು-ಕಾಶ್ಮೀರ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಹೇಳಿದತೆಯೇ ಇಂದು ಸಂಜೆ 5ಗಂಟೆಯಿಂದಲೇ ಇಂಟರ್ನೆಟ್ ಸೇವೆಯೂ ಶುರುವಾಗಿದೆ.
ಕಣಿವೆ ರಾಜ್ಯ ಎನ್ನಲಾಗುತ್ತಿದ್ದ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಸಾಕಷ್ಟು ಬದಲಾವಣೆಗಳಾಗಿತ್ತು. ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿತ್ತು. ಅಂತೆಯೇ ಕಳೆದ ಅಕ್ಟೋಬರ್ 31ನೇ ತಾರೀಕು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಲೆಫ್ಟಿನೆಂಟ್ ಗವರ್ನರ್ಗಳಾಗಿ ಗಿರೀಶ್ ಚಂದ್ರ ಮುರ್ಮು ಮತ್ತು ಆರ್.ಕೆ. ಮಾಥೂರ್ ಅಧಿಕಾರ ಸ್ವೀಕರಿಸಿದ್ದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆಯಾದಂದೇ ಲೆ. ಗವರ್ನರ್ಗಳು ಅಧಿಕಾರ ವಹಿಸಿಕೊಂಡಿದ್ದರು. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ರದ್ದುಗೊಳಿಸಬೇಕೆಂಬುದು ಸರ್ದಾರ್ ವಲ್ಲಭಭಾಯಿ ಪಟೇಲ್ ಕನಸಾಗಿತ್ತು. ಆ ಕನಸನ್ನು ಅವರ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿ ಜಾರಿಗೆ ತರಲು ಮುಂದಾದೆವು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.
ಆಗಸ್ಟ್ 5ರಂದು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಪ್ರಮುಖ ರಾಜಕೀಯ ನಾಯಕರನ್ನು ಪೊಲೀಸ್ ಕಣ್ಗಾವಲಿನಲ್ಲಿಯೇ ಇರಿಸಲಾಗಿತ್ತು. ಇಂಟರ್ನೆಟ್, ಮೊಬೈಲ್ ಸೇವೆಗಳೂ ಸ್ಥಗಿತಗೊಂಡಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಈಗಾಗಲೇ ಕೇಂದ್ರ ಸರ್ಕಾರ ಕೆಲವು ರಾಜಕಾರಣಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇನ್ನೂ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾರನ್ನು ಬಿಡುಗಡೆ ಮಾಡಿಲ್ಲ. ಈ ಮಧ್ಯೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಎಸ್ಎಂಎಸ್ ಸೇವೆ ಮತ್ತು ಇಂಟರ್ನೆಟ್ ಸೇವೆಯೂ ಆರಂಭ ಮಾಡಲಾಗಿದೆ.
Comments are closed.