
ನವದೆಹಲಿ: ಹೈದರಾಬಾದ್ ಪಶು ವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದ ಅತ್ಯಾಚಾರ ಮತ್ತು ಬರ್ಬರ ಹತ್ಯೆಯ ಬಗ್ಗೆ ಇಡೀ ದೇಶ ಸಂತಾಪ ವ್ಯಕ್ತಪಡಿಸುತ್ತಿದೆ. ಈ ಕೃತ್ಯಗಳನ್ನು ಒಕ್ಕೊರಲಿನಿಂದ ಖಂಡಿಸುತ್ತಿದೆ. ಆದರೆ ಈ ಘಟನೆಯ ಬಿಸಿ ಆರುವ ಮುನ್ನವೇ ಇನ್ನಷ್ಟು ಪೈಶಾಚಿಕ ಕೃತ್ಯಗಳು ದೇಶದಲ್ಲಿ ಮುಂದುವರೆಯುತ್ತಿದೆ.
ಗುರುವಾರ ಪ್ರತ್ಯೇಕ ಘಟನೆಗಳಲ್ಲಿ ಒಬ್ಬಳು ಯುವತಿ ಮತ್ತೋರ್ವ ಶಾಲಾ ಟೀಚರ್ ಮೇಲೆ ಅತ್ಯಾಚಾರ ನಡೆದಿವೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಶಾಲಾ ಟೀಚರ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಧಾಮೋಹ್ ಜಿಲ್ಲೆಯಲ್ಲಿ ತರುಣಿಯೊಬ್ಬಳು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ನಡೆದಿದೆ.
ಈ ಘಟನೆಯ ಬೆನ್ನಲ್ಲೇ ಸಿಧಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆರ್ಎಸ್ ಬೆಳ್ವಂಶಿ ಅತ್ಯಾಚಾರ ಸಂತ್ರಸ್ತೆಯ ಹೆಸರನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಲ್ಲದೇ ಸಂತ್ರಸ್ತೆಯ ಮನೆಯ ವಿಳಾಸವನ್ನೂ ಹೇಳಿದ್ದಾರೆ. ಶುಕ್ರವಾರ ಈ ಹೇಳಿಕೆಯನ್ನು ಎಸ್ಪಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಬೇಜವಾಬ್ದಾರಿಗೆ ಟೀಕೆಗಳು ಕೇಳಿ ಬಂದಿವೆ.
ಇದರ ನಡುವೆ, ಇಂದೋರ್ ಬಳಿಯತ ಮ್ಹಾವ್ ಎಂಬ ಊರಿನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾದ ಆರೋಪಿಯನ್ನು ಪೊಲೀಸರು ಕೋರ್ಟ್ಗೆ ಕರೆದೊಯ್ಯುವ ವೇಳೆ ವಕೀಲರ ತಂಡ ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದೆ.
ಸಿಧಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ, ಶಾಲಾ ಅವಧಿ ಮುಗಿದ ನಂತರ ಸುಮಾರು ಸಂಜೆ 5 ಗಂಟೆಯ ಹೊತ್ತಿಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ಅಪಹರಿಸಿದ ಕಾಮುಕರು ಹತ್ತಿರದ ಫಾರ್ಮ್ಹೌಸ್ ಒಂದರಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮೂಹಿಕ ಅತ್ಯಾಚಾರ ಮಾಡಿದ ನಂತರ ಶಿಕ್ಷಕಿ ಸಂಪೂರ್ಣ ಅಸ್ವಸ್ಥರಾಗಿದ್ದಾರೆ. ಈ ಸಮಯದಲ್ಲಿ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಇದಾದ ನಂತರ ಸಾವರಿಸಿಕೊಂಡು ಮನೆಗೆ ತೆರಳಿದ ಶಿಕ್ಷಕಿ ಆದ ಘಟನೆಯನ್ನು ಮನೆಯವರೊಂದಿಗೆ ಹಂಚಿಕೊಂಡಿದ್ದಾರೆ. ಕುಟುಂಬಸ್ಥರು ರಾಂಪುರ್ ನೈಕಿನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ನಂತರ ತಕ್ಷಣ ಕಾರ್ಯನಿರತರಾದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಚ್ಚು ಲೋನಿಯಾ, ಬೀರು ಲೋನಿಯಾ, ನರೇಂದ್ರ ಲೋನಿಯಾ ಮತ್ತು ಶಿವ್ ಶಂಕರ್ ಲೋನಿಯಾ ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಆರೋಪಿಗಳ ಮೇಲೆ ಈ ಹಿಂದೆಯೂ ಹಲವು ಅಪರಾಧ ಆರೋಪಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಧಾಮೋಹ್ನಲ್ಲಿ 17 ವರ್ಷದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಮೇಲೆ ಸ್ಥಳೀಯ ಯುವಕರು ಲೈಂಗಿಕ ಕಿರುಕುಳವನ್ನು ಪ್ರತಿನಿತ್ಯ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಧಾಮೋಹ್ನ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸಿಂಗ್ ಮಾಧ್ಯಮದ ಜತೆ ಮಾತನಾಡಿ, ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಜತೆಗೆ ಸ್ಥಳೀಯರು, ನೆರೆಹೊರೆಯವರು ಮತ್ತು ಕುಟುಂಬದವರ ಹೇಳಿಕೆಗಳನ್ನು ಸಹ ಪಡೆದಿರುವುದಾಗಿ ಮಾಹಿತಿ ನೀಡಿದರು.
ಕುಟುಂಬ ಮೂಲಗಳ ಪ್ರಕಾರ ಕೆಲ ಯುವಕರು ಆಕೆಯನ್ನು ಅಪಹರಿಸುವುದಾಗಿ ಬೆದರಿಕೆಯೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ. ಈ ಕಾರಣಕ್ಕಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ.
ಈ ಘಟನೆಗಳ ಬಗ್ಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ರನ್ನು ಪ್ರಶ್ನಿಸಿದಾಗ, ಈ ರೀತಿಯ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಭರವಸೆ ನೀಡಿದರು. ಮಧ್ಯ ಪ್ರದೇಶವನ್ನು ಮತ್ತೊಂದು ಉತ್ತರ ಪ್ರದೇಶವಾಗಲು ಬಿಡುವುದಿಲ್ಲ, ಈ ರೀತಿಯ ಘಟನೆಯನ್ನು ತಡೆಹಿಡಿಯಲಾಗುವುದು ಎಂದು ಅವರು ತಿಳಿಸಿದ್ದಾರೆ.
Comments are closed.