ರಾಷ್ಟ್ರೀಯ

ಸುಪ್ರೀಂ ಕೋರ್ಟ್‌ಗೆ ವಿದಾಯ ಹೇಳಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌

Pinterest LinkedIn Tumblr


ಹೊಸದಿಲ್ಲಿ: ಶತಮಾನಗಳಷ್ಟು ಹಳೆಯ ಅಯೋಧ್ಯೆ ವಿವಾದ ಇತ್ಯರ್ಥದ ಮೂಲಕ ಜನಮೆಚ್ಚುಗೆ ಗಳಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿತಮ್ಮ ಸೇವಾವಧಿಯ ಕೊನೆಯ ಕಾರ್ಯನಿರ್ವಹಣೆ ದಿನವಾಗಿತ್ತು.

ಶಬರಿಮಲೆ, ಆರ್‌ಟಿಐ, ರಫೇಲ್‌ ಸೇರಿದಂತೆ ಹಲವು ಪ್ರಕರಣಗಳ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿವಾರವಿಡೀ ಕೆಲಸದ ಒತ್ತಡದ ನಡುವೆ ಸಿಲುಕಿದ್ದ ಅವರು, ಶುಕ್ರವಾರ ಬೆಳಗ್ಗೆ ಎಂದಿನಂತೆ 10.30ಕ್ಕೆ ಕಚೇರಿಗೆ ಆಗಮಿಸಿದರು. ಕೋರ್ಟ್‌ ಹಾಲ್‌ 1ರಲ್ಲಿ ನಿಯೋಜಿತ ಸಿಜೆಐ ಎಸ್‌.ಎ.ಬೊಬ್ಡೆ ಅವರೊಂದಿಗೆ ನಾಲ್ಕು ನಿಮಿಷಗಳ ಕಾಲ ಪೀಠದಲ್ಲಿಕುಳಿತಿದ್ದರು. ತಮ್ಮ ಮುಂದೆ ವಿಚಾರಣೆಗೆ ಇರಿಸಲಾದ ಎಲ್ಲಾಹತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ತಲಾ ಒಂದರಂತೆ 10 ನೋಟಿಸ್‌ಗಳನ್ನು ಜಾರಿ ಮಾಡಿದರು.

ಸಂಜೆ ಸುಪ್ರೀಂ ಕೋರ್ಟ್‌ನಲ್ಲಿನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿಇತರೆ ಹಿರಿಯ ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು, ವಕೀಲರ ಸಂಘದ ಅಧ್ಯಕ್ಷರು ಹಾಗೂ ನೂರಾರು ವಕೀಲರು ಭಾಗವಹಿಸಿದರು. ಸಿಜೆಐ ಅವರೊಂದಿಗಿನ ಒಡನಾಟದ ಬಗ್ಗೆ ಭಾವುಕ ನುಡಿಗಳನ್ನಾಡಿದರು.

ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಟಿಪ್ಪಣಿ: ನ್ಯಾಯಮೂರ್ತಿಗಳ ಅಧಿಕಾರಾವಧಿಯ ಕೊನೆಯ ದಿನವಾದ ಹಿನ್ನೆಲೆಯಲ್ಲಿವಿವಿಧ ಮಾಧ್ಯಮಗಳು ಕಳುಹಿಸಿದ ಸಂದರ್ಶನದ ಪ್ರಶ್ನೆಗಳಿಗೆ ಸುದೀರ್ಘ ಟಿಪ್ಪಣಿಯ ಮೂಲಕ ಸಿಜೆಐ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗವು ತನ್ನ ಸ್ವಾತಂತ್ರ್ಯವನ್ನು ಚಲಾವಣೆ ಮಾಡಬೇಕಾದಾಗ ಅನುಸರಿಸಬೇಕಾದ ‘ಮೌನ’ ಸೇರಿದಂತೆ, ಪ್ರಾಮಾಣಿಕತೆ, ನ್ಯಾಯಾಂಗದ ವಿಶ್ವಾಸಪರತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಪ್ರಕಟಿಸಿದ ಟಿಪ್ಪಣಿಯಲ್ಲಿವಿವರಿಸಿದ್ದಾರೆ.

”ಕೆಲವು ವಕೀಲರ ಸಂಘದ (ಬಾರ್‌) ಸದಸ್ಯರು ಸ್ವಾತಂತ್ರ್ಯದ ಪರಧಿಗಳನ್ನು ಮೀರುತ್ತಾರೆ. ಆದರೆ, ನ್ಯಾಯಮೂರ್ತಿಗಳು ಮೌನವನ್ನು ಮೀರಬಾರದು. ಹಾಗೆಂದ ಮಾತ್ರಕ್ಕೆ ಅವರು ಮಾತನಾಡಬಾರದು ಎಂದಲ್ಲ. ಕೇವಲ ಕಾರ್ಯ ಸಂಬಂಧಿತ ಅಗತ್ಯಕ್ಕೋಸ್ಕರ ಸುಮ್ಮನಿರಬೇಕು,”ಎಂದು ಅವರು ಟಿಪ್ಪಣಿಯಲ್ಲಿಅವರು ಸಲಹೆ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಪ್ರಾಮಾಣಿಕತೆ, ಸತ್ಯಪರತೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ”ಮಾಧ್ಯಮಗಳ ಮುಂದೆ ಹೋಗುವುದು ಎಂದಿಗೂ ನನ್ನ ನೆಚ್ಚಿನ ಆಯ್ಕೆಯಲ್ಲ. ಸಾರ್ವಜನಿಕರ ವಿಶ್ವಾಸ ಮತ್ತು ನಂಬಿಕೆಯನ್ನು ಆಧರಿಸಿರುವ ಸಂಸ್ಥೆಗೆ ಸೇರಿದವನಾಗಿರಲು ನಾನು ಬಯಸುತ್ತೇನೆ,” ಎಂದಿದ್ದಾರೆ. ಆ ಮೂಲಕ ಮಾಧ್ಯಮಗಳಿಗೆ ಸಂದರ್ಶನಗಳಿಗೆ ತಾವು ಏಕೆ ಒಪ್ಪುತ್ತಿಲ್ಲಎಂಬುದನ್ನು ವಿವರಿಸಿದ್ದಾರೆ. ಹಲವು ಸಂದರ್ಭಗಳಲ್ಲಿಮಾಧ್ಯಮಗಳು ತೋರಿದ ಪ್ರಬುದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೋಗೋಯ್‌ ಕುರಿತ ಪ್ರಮುಖ ಸಂಗತಿಗಳು

* ಅ.3, 2018ರಲ್ಲಿ46ನೇ ಸಿಜೆಐ ಆಗಿ ಕಾರ್ಯಾರಂಭ
* ಸಿಜೆಐ ಸ್ಥಾನಕ್ಕೇರಿದ ಮೊದಲ ಈಶಾನ್ಯ ಭಾರತದ ವ್ಯಕ್ತಿಯೆಂಬ ಹೆಗ್ಗಳಿಕೆ
* 13 ತಿಂಗಳ ಸಿಜೆಐ ಅಧಿಕಾರಾವಧಿ ನ.17 (ಭಾನುವಾರ) ಅಂತ್ಯ
* ಕಠಿಣ ಹಾಗೂ ಅನಿರೀಕ್ಷಿತ ತೀರ್ಮಾನಗಳಿಗೆ ಹೆಸರುವಾಸಿ
* ಸುಪ್ರೀಂ ಕೋರ್ಟ್‌ನ ಇತರೆ 3 ನ್ಯಾಯಮೂರ್ತಿಗಳ ಜತೆ ಬಹಿರಂಗ ಸುದ್ದಿಗೋಷ್ಠಿ
* ಆಗಿನ ಸಿಜೆಐ ದೀಪಕ್‌ ಮಿಶ್ರಾ ವಿರುದ್ಧ ಬಂಡಾಯ, ಬಹಿರಂಗವಾಗಿ ಅಸಮಾಧಾನ ವ್ಯಕ್ತ
* ಗೊಗೊಯ್‌ ವಿರುದ್ಧ ಮಹಿಳಾ ಉದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪ
* ತನಿಖಾ ಸಮಿತಿಯಿಂದ ಗೊಗೊಯ್‌ ಅವರಿಗೆ ಕ್ಲೀನ್‌ಚಿಟ್‌

Comments are closed.